ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 05 : ತಾಲ್ಲೂಕಿನ ಮದ್ದನಕುಂಟೆ ಗ್ರಾಮದಲ್ಲಿ ಅಪರೂಪದ ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಮೆಗಲಾಥಿಕ್ ಸಂಸ್ಕೃತಯ ಕಾಲದ ಬೃಹತ್ ಶಿಲಾ ಸಮಾಧಿ ಪತ್ತೆಯಾಗಿದೆ.
ಉಪನ್ಯಾಸಕರಾದ ಡಾ.ಮಹೇಶ್ ಕುಂಚಿಗನಾಳ್ ಹಾಗೂ ಅವರ ತಂಡವು ಇತ್ತೀಚಿಗೆ ಮದ್ದನಕುಂಟೆ ಗ್ರಾಮದಲ್ಲಿ ಕ್ಷೇತ್ರಕಾರ್ಯ ಮಾಡುವಾಗ ಈ ಶಿಲಾಸಮಾಧಿ ಪತ್ತೆಯಾಗಿದೆ. ಸಮಾಧಿಯನ್ನು ಸ್ಥಳೀಯವಾಗಿ ಸಿಗುವ ವೃತ್ತಕಾರದ ಕಾಡುಗಲ್ಲುಗಳನ್ನು ಬಳಸಿ ನಿರ್ಮಿಸಿದ್ದಾರೆ. ಅದೇ ರೀತಿ ಸಮಾಧಿಯ ಒಂದು ಪಾಶ್ವದಲ್ಲಿ ಕಾಡುಗಲ್ಲಿನಿಂದ ಸುಮಾರು 5-6 ಅಡಿ ಎತ್ತರದ ನಿಲುಸುಗಲ್ಲು (Menhir) ನಿಲ್ಲಿಸಲಾಗಿದೆ. ಸಮಾಧಿಯ ಸುಮಾರು 15 ಅಡಿ ವ್ಯಾಸ ಹೊಂದಿದೆ. ಡಾ.ಮಹೇಶ್ ರವರು ಕಲ್ಲು ಕತ್ತರಿಸಲು ಪಳಗಿದ್ದ ಕಬ್ಬಿಣ ಯುಗದ ಕಾಲದ ಮಾನವರು ನಿರ್ಮಿಸಿದ ಡಾಲ್ಮನ್ ಮಾದರಿಯ ಸಿಸ್ಟ್ ಸಮಾಧಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಂತಹ ಸಮಾಧಿಯ ಒಳಗಡೆ ಮಾನವನ ಅಸ್ಥಿಯ ಕುಡಿಕೆ, ಅವರು ಬಳಸುತ್ತಿದ್ದ ವಸ್ತುಗಳ ಕುರುಹುಗಳ ಸಿಕ್ಕಿರುವುದನ್ನು ಉತ್ಖನನಕಾರರು ಗುರುತಿಸಿದ್ದಾರೆ.
ಡಾ.ಮಹೇಶ್ ರವರು ತಿಳಿಸಿರುವಂತೆ ಜನವಸತಿಯ ಸನಿಹದಲ್ಲಿಯೇ ಇದು ಇದೆ. ಸಮೀಪದಲ್ಲಿ ಸುಮಾರು 12ನೇ ಶತಮಾನದ ಕಾಳಿಯ ಗುಡಿ ಸಹ ಇದೆ. ಧಾರ್ಮಿಕ ಕೇಂದ್ರದ ಬಳಿ ಈ ಸಮಾಧಿ ಇರುವುದು ಧಾರ್ಮಿಕ ದೃಷ್ಠಿಯಿಂದ ವಿಶೇಷ ಎಂದಿದ್ದಾರೆ. ಸಮೀಪದಲ್ಲಿ ವಿಜಯನಗರ ಕಾಲದ ಹನುಮನ ಶಿಲಾಮೂರ್ತಿ ಹಾಗೂ ಎರಡು ವೀರಗಲ್ಲುಗಳಿವೆ. ಈ ಜಾಗವನ್ನು ಹಾಳೂರು ಎಂದು ಕರೆಯುತ್ತಾರೆ. ಈಗ ಬೇಚರಾಕ ಗ್ರಾಮವಾಗಿದೆ. ನಿಲುಸುಗಲ್ಲುಗಳ ಅಂತ್ಯಕ್ರಿಯೆಯನ್ನು ಮಾಡಿರುವುದನ್ನು ಗುರುತಿಸಲು ನಿಲ್ಲಿಸಲಾಗಿರುತ್ತದೆ. ಕಲ್ಲಿನ ಮುಚ್ಚಳಗಳನ್ನು ನಿಧಿಗಳ್ಳರು ಹೊರತೆಗೆದಿದ್ದಾರೆ. ಎತ್ತರ, ಗಾತ್ರ ಸಮಾಧಿಯಿಂದ ಮತ್ತೊಂದು ಸಮಾಧಿಗೆ ಭಿನ್ನತೆ ಹೊಂದಿರುತ್ತವೆ ಎಂದು ಡಾ.ಮಹೇಶ್ ರವರು ತಿಳಿಸಿದ್ದಾರೆ. ಕ್ಷೇತ್ರಕಾರ್ಯದಲ್ಲಿ ನೆರವಾದ ಪ್ರಬುದ್ಧ, ಪ್ರತ್ಯುಷ್ಯ, ಲಕ್ಷ್ಮೀಶನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.























