ತುಮಕೂರು, ಫೆಬ್ರವರಿ. 26 : ಕಾಂಗ್ರೆಸ್ ಪಾಳಯದಲ್ಲಿ ಮೊದಲೇ ಹಗ್ಗಜಗ್ಗಾಟ ನಡೆಯುತ್ತಿದೆ. ಸಿಎಂ ಸ್ಥಾನ ಬದಲಾವಣೆ ಚರ್ಚೆ ಒಂದು ಕಡೆಯಾದರೆ ಇತ್ತ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯೂ ಮತ್ತೊಂದು ಕಡೆ ಆಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಪೈಪೋಟಿಯಲ್ಲಿ ಇದ್ದಾರೆ. ಇದರ ನಡುವೆ ಕೆ.ಎನ್.ರಾಜಣ್ಣ ರಾಜೀನಾಮೆಯ ವಿಚಾರ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಬಹಿರಂಗವಾಗಿಯೇ ತಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಇದೀಗ ರಾಜಣ್ಣನವರ ರಾಜೀನಾಮೆ ಪೋಸ್ಟರ್ ವೈರಲ್ ಆಗುತ್ತಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ತುಮುಲ್ ಅಧ್ಯಕ್ಷರ ಚುನಾವಣೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಪತ್ನಿ ಭಾರತಿದೇವಿ ಅವರು ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದರು. ಗುಬ್ಬಿ ಶ್ರೀನಿವಾಸ್ ಕೂಡ ಪರಮೇಶ್ವರ್ ಹಾಗೂ ರಾಜಣ್ಣ ವಿರುದ್ಧ ನೇರವಾಗಿಯೇ ಆಕ್ರೋಶ ಹೊರ ಹಾಕಿದ್ದರು. ಇದೀಗ ಶಾಸಕ ಶ್ರೀನಿವಾಸ್ ಅವರ ಅಭಿಮಾನಿ ಬಳಗದವರು ರಾಜಣ್ಣ ರಾಜೀನಾಮೆ ಬಗ್ಗೆ ಪೋಸ್ಟ್ ಹಾಕುತ್ತಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಗುಬ್ಬಿ ಶ್ರೀನಿವಾಸ್ ಅವರ ಫ್ಯಾನ್ ಪೇಜ್ ನಲ್ಲಿ ರಾಜಣ್ಣ ಕಂಪ್ಯೂಟರ್ ನೋಡುತ್ತಾ ಕುಳಿತಿದ್ದು, ಆ ಪರದೆ ಮೇಲೆ ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆ ಎಂದು ತೋರಿಸುತ್ತಿರುವ ಫೋಟೋ ಇದಾಗಿದೆ. ಇನ್ನು ಈ ಫ್ಯಾನ್ ಪೇಜ್ ನಲ್ಲಿ ಹಲವು ದಿನಗಳಿಂದಾನೂ ಕೆ.ಎನ್.ರಾಜಣ್ಣ ಹಾಗೂ ಪರಮೇಶ್ವರ್ ವಿರುದ್ಧದ ಪೋಸ್ಟ್ ಗಳೇ ಹರಿದಾಡುತ್ತಿವೆ. ಕೆ.ಎನ್.ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ.


















