ಬೆಂಗಳೂರು; ಡಾ.ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಹೋದ ಮೇಲೆ ಕನ್ನಡ ಚಿತ್ರರಂಗದ ಮುಂದಾಳತ್ವ ವಹಿಸುವುದಕ್ಕೆ ಯಾರು ಇಲ್ಲವೆಂಬಂತೆ ಆಗೋಗಿದೆ. ಸಾಕಷ್ಟು ಸಲ ಶಿವಣ್ಣ ಹಾಗೂ ರವಿಚಂದ್ರನ್ ಅವರ ಹೆಸರೇ ಹೆಚ್ಚಾಗಿ ಕೇಳಿ ಬಂದಿತ್ತು. ಈ ಇಬ್ಬರಲ್ಲಿ ಯಾರಾದ್ರೂ ಜವಾಬ್ದಾರಿ ತೆಗೆದುಕೊಳ್ಳಿ ಅಂತಾನೇ ಹೇಳಲಾಯ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿವಣ್ಣ ಮನೆಯಲ್ಲಿ ದೊಡ್ಡ ಸಭೆಯೇ ನಡೆದಿದೆ.
ಶಿವಣ್ಣರ ನೇತೃತ್ವದಲ್ಲಿ ನಾಗಾವರದಲ್ಲಿರುವ ನಿವಾಸದಲ್ಲಿ ಈ ಸಭೆ ನಡೆದಿದೆ. ಈ ಮೀಟಿಂಗ್ ಗೆ ದುನಿಯಾ ವಿಜಯ್, ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಜೊತೆಗೆ ವಿತರಕರು ಹಾಗೂ ಪ್ರದರ್ಶಕರು ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಸಭೆಯಲ್ಲಿ ಚಿತ್ರರಂಗದಲ್ಲಿ ಆಗ್ತಾ ಇರುವಂತ ಸಮಸ್ಯೆಗಳು, ಅದಕ್ಕೆ ಸಿಗಬಹುದಾದಂತ ಪರಿಹಾರಗಳ ಬಗ್ಗೆಯೂ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಸಿನಿನಾಗಳಿಗೆ ಜನ ಬರ್ತಾ ಇಲ್ಲ, ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ, ಟಿಕೆಟ್ ಬೆಲೆ ವಿಚಾರ, ದಿನೇ ದಿನೇ ಕಡಿಮೆಯಾಗುತ್ತಿರುವ ಕನ್ನೆ ಸಿನಿಮಾಗಳು, ನಿರ್ಮಾಪಕರ ಸಮಸ್ಯೆಗಳು, ವಿತರಕರು – ಪ್ರದರ್ಶಕರ ಸಂಕಷ್ಟ ಹೀಗೆ ಹಲವು ವಿಚಾರಗಳ ಬಗ್ಗೆ ಶಿವಣ್ಣನ ನೇತೃತ್ವದಲ್ಲಿ ಸಭೆಯಲ್ಲಿ ಚರ್ಚೆಯಾಗಿವೆ.
ಈ ಸಂಬಂಧ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಥಿಯೇಟರ್ ಸಮಸ್ಯೆ ದೂರ ಮಾಡುವುದಕ್ಕೆ ಶಿವಣ್ಣ ಮನೆಯಲ್ಲಿ ಸಭೆ ನಡೆದಿದೆ. ಆದಷ್ಟು ಬೇಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧಾರ ಮಾಡಲಾಗಿದೆ. ಹೀರೋಗಳು ಐದು ವರ್ಷಕ್ಕೆ ಒಂದು ಸಿನಿಮಾ ಮಾಡುವ ಬದಲು ವರ್ಷಕ್ಕೆ ಎರಡು ಸಿನಿಮಾಗಳನ್ನ ಮಾಡುವಂತೆ ಮನವಿ ಮಾಡಲಾಗಿದೆ. ಥಿಯೇಟರ್ ಗಳನ್ನ ಮುಚ್ಚುತ್ತಿರುವುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
























