ದಾವಣಗೆರೆ: ಬಿಜೆಪಿ ಪಕ್ಷದಲ್ಲೂ ಆಂತರಿಕ ಭಿನ್ನಾಭಿಪ್ರಾಯ ಜೋರಾಗಿದೆ. ಅದನ್ನ ಬಗೆಹರಿಸುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಂದಾಗಿದ್ದಾರೆ. ನಾಳೆ ಬಿಜೆಪಿ ಕಚೇರಿಗೆ ರೇಣುಕಾಚಾರ್ಯ ಹಾಗೂ ತಂಡದ ಜೊತೆಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಸಭೆಗೆ ಹಾಜರಾಗುವಂತೆ ರೇಣುಕಾಚಾರ್ಯ ಹಾಗೂ ಅವರ ತಂಡಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ.
ದಾವಣಗೆರೆಯ ಲೋಕಸಭಾ ಚುನಾವಣೆಯ ಸೋಲಿನ ಬಗ್ಗೆ ಬಿಜೆಪಿ ನಾಯಕರಲ್ಲಿ ಇಂದಿಗೂ ಬೇಸರವಿದೆ. ಬರೀ ರಾಜ್ಯ ಬಿಜೆಪಿಯಲ್ಲಿ ಮಾತ್ರವಲ್ಲ, ಕೇಂದ್ರದ ವರಿಷ್ಠರು ಈ ಬಗ್ಗೆ ಬೇಸರ ವ್ಯಕ್ತಪಡಿಸಿರೋದಿದೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದಾಗ, ರಾಜ್ಯ ನಾಯಕರ ಜೊತೆಗೆ ದಾವಣಗೆರೆ ಸೋಲಿನ ಬಗ್ಗೆ ಚರ್ಚೆ ಮಾಡಿದ್ದರು. ಆಗ ರೇಣುಕಾಚಾರ್ಯ ವಿಚಾರವೂ ಬಂದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದ ಮಾಜಿ ಸಂಸದ ಸಿದ್ದೇಶ್ವರ್ ಹಾಗೂ ಶಾಸಕ ಬಿ.ಪಿ.ಹರೀಶ್ ದಾವಣಗೆರೆ ಲೋಕಸಭಾ ಚುನಾವಣೆಯ ಸೋಲಿಗೆ ರೇಣುಕಾಚಾರ್ಯ ಮತ್ತು ತಂಡದ ಅಡ್ಜೆಸ್ಟಮೆಂಟ್ ಕಾರಣ ಎಂದು ದೂರು ನೀಡಿದ್ದರು.
ಈ ರೀತಿಯ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ಮತ್ತಷ್ಟು ನಷ್ಟವಾಗುವುದು ಎಂದು ಅರಿತಿರುವ ಹೈಕಮಾಂಡ್ ನಾಯಕರು ಪ್ರಹ್ಲಾದ್ ಜೋಶಿಗೆ ಸೂಚನೆ ನೀಡಿದೆ. ದಾವಣಗೆರೆಯಲ್ಲಿ ಬಿಜೆಪಿ ನಾಯಕರ ನಡುವೆ ಏನೇ ಸಮಸ್ಯೆಗಳಿದ್ದರು ಕೂತು ಬಗೆಹರಿಸಲು ಸೂಚನೆ ನೀಡಿದೆ. ಹೈಕಮಾಂಡ್ ಸೂಚನೆ ಮೇರೆಗೆ ಇದೀಗ ಪ್ರಹ್ಲಾದ್ ಜೋಶಿ ಕೂಡ ದಾವಣಗೆರೆಯ ಸಮಸ್ಯೆಗೆ ಮದ್ದು ಅರೆಯಲು ಸಿದ್ದವಾಗಿದ್ದಾರೆ. ಜೋಶಿ ನೇತೃತ್ವದಲ್ಲಿ ಸಮಸ್ಯೆಗಳು ಬಗೆಹರಿಯಬಹುದಾ ಎಂಬುದನ್ನ ನಾಳೆವರೆಗೂ ಕಾದು ನೋಡಬೇಕಿದೆ.











