ಸುದ್ದಿಒನ್, ಹೊಳಲ್ಕೆರೆ, ಮಾರ್ಚ್. 21 : ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಲ್ಲಿನ ಕೆಲ ಜಾತಿಗಳ ವಿಷಯದಲ್ಲಿ ಅಸಡ್ಡೆ ತೋರುತ್ತಿರುವ ಕೆಲ ಸಚಿವರು, ಮುಖಂಡರು ಒಳಮೀಸಲಾತಿ ಜಾರಿ ಮೂಲಕ ಎಸ್ಸಿ ಗುಂಪನ್ನು ಇಬ್ಭಾಗ ಮಾಡುವ ಷಡ್ಯಂತ್ರ ನಡೆಸಲಾಗಿದೆ ಎಂದು ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ಸಂಚಾಲಕ ಡಿ.ಸಿ.ಮೋಹನ್ ದೂರಿದರು.
ಅವೈಜ್ಞಾನಿಕ ಒಳ ಮೀಸಲಾತಿ ತಾರತಮ್ಯ ವಿರೋಧಿಸಿ ಮಾ 24 ರಂದು ಹಮ್ಮಿಕೊಂಡಿರುವ ಬೆಂಗಳೂರು ಚಲೋ ಬೃಹತ್ ಪ್ರತಿಭಟನಾ ಸಮಾವೇಶದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ
ಗ್ರಾಮಗಳಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿ 101 ಜಾತಿಯವರಿದ್ದು ಬಹುತೇಕ ಎಲ್ಲರೂ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅತ್ಯಂತ ಶೋಚನಿಯ ಸ್ಥಿತಿಯಲ್ಲಿರುವ ಎಸ್ಸಿ ಗುಂಪನ್ನು ಛಿದ್ರಗೊಳಿಸಲು ಒಳಮೀಸಲಾತಿಯನ್ನೇ ಅಸ್ತçವನ್ನಾಗಿಸಿಕೊಳ್ಳಲಾಗಿದೆ. ಈ ಮೂಲಕ
ಒಗ್ಗಟ್ಟು ಹಾದಿಯಲ್ಲಿದ್ದ ಸಮುದಾಯದಲ್ಲಿ ಒಡಕು ಮೂಡಿಸಲಾಗಿದೆ ಎಂದು ದೂರಿದರು.
ಒಳಮೀಸಲಾತಿ ಜಾರಿಗೆ ನಾವ್ಯಾರು ವಿರೋಧಿಗಳಲ್ಲ. ಆದರೆ, ಅದು ವೈಜ್ಞಾನಿಕವಾಗಿ ಆಗಬೇಕು. ಆದರೆ, ಸುಪ್ರೀಂ ಕೋರ್ಟ್ ಆದೇಶವನ್ನೇ ತಪ್ಪಾಗಿ ಅರ್ಥೈಸಿಕೊಂಡು ರಾಜ್ಯದಲ್ಲಿ ಅವೈಜ್ಞಾನಿಕವಾಗಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ. ಜೊತೆಗೆ ರೋಸ್ಟರ್ ಪದ್ಧತಿ ಮೂಲಕ ಶತಮಾನಗಳ ಕಾಲ ಕೆಲ ಸಮುದಾಯಗಳಿಗೆ ಯಾವುದೇ ಸೌಲಭ್ಯ ದೊರೆಯದ ರೀತಿ ನೀತಿ ರೂಪಿಸಲಾಗಿದೆ
ಎಂದು ಆತಂಕ ವ್ಯಕ್ತಪಡಿಸಿದರು.
ಭೋವಿ ಸಮಾಜದ ಹಿರಿಯ ಮುಖಂಡ ಹನುಮಂತಪ್ಪ ಗೋಡೆಮನೆ ಮಾತನಾಡಿ, ಮೀಸಲಾತಿ ಸೌಲಭ್ಯವನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕೆಂಬುದು ನಮ್ಮೆಲ್ಲರ ಒತ್ತಾಸೆ. ಆದರೆ, ಕೆಲವರ
ಒತ್ತಡಕ್ಕೆ ಮಣಿದು ಸಂವಿಧಾನ, ಸುಪ್ರೀಂ ಕೋರ್ಟ್ ಆಶಯದ ವಿರುದ್ಧವೇ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ದೂರಿದರು.
ಅಲೆಮಾರಿ ಸಮುದಾಯವನ್ನು ಬಿ ವರ್ಗದಲ್ಲಿ ಸೇರಿಸುವ ಜೊತೆಗೆ ಒಳಮೀಸಲಾತಿಯಲ್ಲಿ ಮತ್ತೊಂದು ಒಳಮೀಸಲಾತಿ ನೀತಿ ರೂಪಿಸಲಾಗಿದೆ. ಇದರಿಂದ ಅಲೆಮಾರಿಗಳಿಗೂ ಹಾಗೂ ಬಿ
ಗುಂಪಿನಲ್ಲಿರುವ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ತೀವ್ರ ಅನ್ಯಾಯ ಮಾಡಲಾಗಿದೆ ಎಂದರು.
ಯಾವುದೋ ಒಂದು ಸಮುದಾಯದ ಒತ್ತಡಕ್ಕೆ ಮಣಿದು ಮೀಸಲಾತಿ ಹಂಚಿಕೆ ಮಾಡುವುದಾದರೆ ಎಸ್ಸಿಯಲ್ಲಿರುವ 100 ಜಾತಿಗಳು ಅತ್ಯಂತ ಹಿಂದುಳಿಯಲಿವೆ. ಈ ಮೂಲಕ ಶೋಷಣೆಗೆ
ಒಳಗಾಗಿರುವ ನಮ್ಮನ್ನು ಮತ್ತಷ್ಟು ಹಿಂದುಳಿಯುವತೆ ಮಾಡಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಒಳ ಮೀಸಲಾತಿ ರೋಸ್ಟರ್ ಹಂಚಿಕೆ ಮತ್ತು ಹಳೆಯ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿ ನಡೆಸಬೇಕು. ಈ ಹಿನ್ನೆಲೆಯಲ್ಲಿ ಮಾ.24 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಂಜಾರ ಸಮಾಜದ ಸೇವಾಲಾಲ್ ಸ್ವಾಮೀಜಿ ಪ್ರತಿಭಟನೆ ನೇತೃತ್ವ ವಹಿಸಲಿದ್ದು, ಹೊಳಲ್ಕೆರೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯಿಂದ ಕನಿಷ್ಠ 30 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದರು.
ಮುಖಂಡರಾದ ನವೀನ್ ಅರಸನಘಟ್ಟ, ಮಹಾಂತೇಶ್ ಕಾಳಘಟ್ಟ, ತಿಮ್ಮಣ್ಣ ಕಾಶಿಪುರ, ವೆಂಕಟೇಶ್ ಜೈಪುರ, ಪ್ರತಾಪ್ ರಾಮೆನಹಳ್ಳಿ, ಇಂಧುದರ್ ಅರಸನಘಟ್ಟ, ಬಸವರಾಜ್ ಎಂ.ಎ.ಹಟ್ಟಿ, ಆನಂದಪ್ಪ ಚಿಕ್ಕಂದಾವಡಿ, ಗುರುಸ್ವಾಮಿ, ನಾಗರಾಜ್ ಚಿತ್ರಹಳ್ಳಿ, ತಿಮ್ಮಣ್ಣ
ದಾಸಯ್ಯನಹಟ್ಟಿ ಇತರರು ಪಾಲ್ಗೊಂಡಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















