ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 17 : ಭಾರತೀಯ ಸಂಸ್ಕೃತಿಯ ಚೌಕಟ್ಟಿನೊಳಗೆ ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿದ ಸಿದ್ದವ್ವನಹಳ್ಳಿ ಕೃಷ್ಣಶರ್ಮರವರದು ಮೇರು ವ್ಯಕ್ತಿತ್ವ. ಜಂಗಮ ವೃತ್ತಿಯಂತೆ ಓಡಾಟ ನಡೆಸಿ ಕಷ್ಟ ಕಾಲದಲ್ಲಿಯೂ ಯಾರನ್ನು ಬೇಡಿದವರಲ್ಲ ಎಂದು ಸಂಸ್ಕøತ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.
ಸಂಸ್ಕಾರ ಭಾರತಿ ಕರ್ನಾಟಕ, ಕರ್ನಾಟಕ ದಕ್ಷಿಣ ಪ್ರಾಂತ ಸಾಹಿತ್ಯ ವಿಭಾಗದಿಂದ ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಬುಧವಾರ ನಡೆದ ನಾಡಿನ ಹೆಮ್ಮೆಯ ಸಾಹಿತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಗಾಟಿಸಿ ಮಾತನಾಡಿದರು.
ಅಸಮಾನ್ಯ ಪ್ರತಿಭೆಯುಳ್ಳವರಾಗಿದ್ದ ಸಿದ್ದವ್ವನಹಳ್ಳಿ ಕೃಷ್ಣಶರ್ಮರು ಕರ್ನಾಟಕಕ್ಕಷ್ಟೆ ಅಲ್ಲ. ಭಾರತಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪರ್ಣಕುಣಿ ಬರವಣಿಗೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿತು. ಸಾಹಿತ್ಯ ಬರವಣಿಗೆ ಮೂಲಕ ಎಲ್ಲರ ಅಂತರಂಗದಲ್ಲಿ ಉಳಿದುಕೊಂಡಿದ್ದಾರೆ. 140 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದು, ಅದರಲ್ಲಿ ಅನುವಾದವೆ ಜಾಸ್ತಿ. ಆಲೂರು ವೆಂಕಟರಾಯರು, ಬೆಟಗೆರೆ ಕೃಷ್ಣಮೂರ್ತಿ, ಮಹಾತ್ಮಗಾಂಧಿ, ಆಲೂರು ವೆಂಕಟರಾಯರ ಒಡನಾಡಿಯಾಗಿದ್ದರು. ಉರ್ದು, ಮರಾಠಿ ಭಾಷೆಗಳ ಒತ್ತಡವಿರುವ ಕಾಲದಲ್ಲಿ ಕನ್ನಡವನ್ನು ಉಳಿಸಲು ಸ್ವದೇಶಿ ಭಾವನೆ, ಸ್ವಧರ್ಮ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಸಿದ ಶ್ರೇಷ್ಠ ವ್ಯಕ್ತಿತ್ವವುಳ್ಳವರಾಗಿದ್ದರೆಂದು ಪ್ರಶಂಶಿಸಿದರು.
ಪತ್ರಿಕಾ ಸಾಹಿತ್ಯದ ಜೊತೆ ಉತ್ಕಟವಾದ ರಾಷ್ಟ್ರಪ್ರೇಮ ಬೆಳೆಸಿಕೊಂಡು ಕನ್ನಡಕ್ಕೆ ತೇಜಸ್ಸು, ಸೌಂದರ್ಯ ತಂದುಕೊಟ್ಟ ಸಿದ್ದವ್ವನಹಳ್ಳಿ ಕೃಷ್ಣಶರ್ಮರವರ ಬರವಣಿಗೆಯಲ್ಲಿ ನಿಚ್ಚಳವಾದ ಚಿಂತನೆ, ಮಿಂಚಿತ್ತು. ಅನೇಕ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿದ್ದುಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧಿ ಜೊತೆ ತೊಡಗಿಸಿಕೊಂಡು ಅನೇಕ ಲೇಖಕರನ್ನು ಬೆಳೆಸಿದರು. ಗಾಂಧಿ ಸಾಹಿತ್ಯ ಹುಟ್ಟು ಹಾಕಿ ಶ್ರೀರಾಮ ಸಹಕಾರಿ ಬ್ಯಾಂಕ್ ಸ್ಥಾಪಿಸಿ ಉಳಿತಾಯದ ಕಡೆ ಚಿಂತಿಸುವ ಜಾಗೃತಿಯನ್ನು ಜನತೆಯಲ್ಲಿ ಮೂಡಿಸಿದರು ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಜ್ಞೆ ಜೊತೆ ಕನ್ನಡ ಸಾಹಿತ್ಯ ವಿಸ್ತರಿಸಿದರು. ಅವರ ವ್ಯಕ್ತಿಚಿತ್ರ ವಿಶಿಷ್ಟವಾಗಿತ್ತು. ರಾಷ್ಟ್ರೀಯ ನಾಯಕರುಗಳ ಜೊತೆ ನೇರ ಸಂಬಂಧವಿಟ್ಟುಕೊಂಡವರು. ಸಮಯ ಸ್ಪೂರ್ತಿ, ವಿಶಿಷ್ಟ ಗುಣ ಅವರದು. ಕರ್ನಾಟಕದಲ್ಲಿ ನವೋದಯದ ರಾಷ್ಟ್ರೀಯ ಪ್ರಜ್ಞೆ ರೂಪಿಸಿ ಕನ್ನಡ ಸಾಹಿತ್ಯಕ್ಕೆ ಸ್ವಾಸ್ಥ್ಯ ಅಸ್ಮಿತೆಯನ್ನು ಕೊಟ್ಟವರು. ಈಗಿನ ಪ್ರಶಿಕ್ಷಣಾರ್ಥಿಗಳು ಕುವೆಂಪು, ಬೇಂದ್ರೆ, ಸಿದ್ದವ್ವನಹಳ್ಳಿ ಕೃಷ್ಣಶರ್ಮರವರ ಬರವಣಿಗೆಯನ್ನು ಓದಬೇಕೆಂದು ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಸಿದ್ದವ್ವನಹಳ್ಳಿ ಕೃಷ್ಣಶರ್ಮರವರು ಅವರ ಚಿಕ್ಕಪ್ಪನಿಂದ ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಂಡವರು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚು ಒತ್ತು ಕೊಡಬೇಕೆಂಬ ನೀತಿ ಅವರದಾಗಿತ್ತು. ಹೈದರಾಬಾದ್ನಲ್ಲಿ ಕನ್ನಡವನ್ನು ಉರ್ದುವಿನಲ್ಲಿ ಹೇಳಿಕೊಡುತ್ತಿದ್ದರು. ನಂತರ ಉರ್ದುವಿನಲ್ಲಿ ಹೇಳಿಕೊಡುವ ಬದಲು ಕನ್ನಡದಲ್ಲಿಯೇ ಕನ್ನಡವನ್ನು ಕಲಿಸಲು ಆರಂಭಿಸಿ ಹೋದ ಕಡೆಗಳಲ್ಲಾ ಕನ್ನಡದ ಕಂಪನ್ನು ಪಸರಿಸಿ ಹುಣಸೆ ಮರ, ಆಲದ ಮರದ ರೀತಿ ಬದುಕಿದವರು ಎಂದು ಗುಣಗಾನ ಮಾಡಿದರು.
ಕನ್ನಡ ಸಾಹಿತ್ಯದಿಂದ ಹಿಡಿದು ರಾಷ್ಟ್ರೀಯ ವಿಚಾರ, ಸಹಕಾರ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ಬದುಕನ್ನು ಸಮಾಜಕ್ಕೆ ಸಮರ್ಪಣೆ ಮಾಡಿಕೊಂಡವರು ಸಿದ್ದವ್ವನಹಳ್ಳಿ ಕೃಷ್ಣಶರ್ಮರವರು. ಚಿತ್ರದುರ್ಗ ಜಿಲ್ಲೆ ಬರದ ನಾಡಾಗಿರಬಹುದು, ಆದರೆ ಸಾಹಿತ್ಯದಲ್ಲಿ ಅತ್ಯಂತ ಸಮೃದ್ದಿಯಿಂದ ಕೂಡಿದೆ. ದೊಡ್ಡಸಿದ್ದವ್ವನಹಳ್ಳಿಯಲ್ಲಿ ಹೈಟೆಕ್ ಗ್ರಾಮ ಪಂಚಾಯಿತಿ ಕಟ್ಟಿ ಸಭಾಂಗಣಕ್ಕೆ ಅವರ ಹೆಸರಿಡುತ್ತೇವೆ. ಎಲ್ಲರ ಬದುಕಿನಲ್ಲಿಯೂ ಅಂತಹ ಮಹಾನ್ ಚೇತನವನ್ನು ಪ್ರೇರಣೆಯಾಗಿಟ್ಟುಕೊಳ್ಳಬೇಕೆಂದರು.
ಸಂಸ್ಕಾರ ಭಾರತಿ ಜಿಲ್ಲಾ ಸಮಿತಿ ಅಧ್ಯಕ್ಷ ಉಮೇಶ್ ವಿ.ತುಪ್ಪದ್ ಅಧ್ಯಕ್ಷತೆ ವಹಿಸಿದ್ದರು. ಜ್ಞಾನಪೂರ್ಣ ಇಂಟರ್ ನ್ಯಾಷನಲ್ ಸ್ಕೂಲ್ನ ಸಂಸ್ಥಾಪಕ ವೆಂಕಟೇಶ್ರೆಡ್ಡಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್, ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಸಾಹಿತ್ಯ ವಿಭಾಗ ಸಂಸ್ಕಾರ ಭಾರತಿಯ ಸಂಚಾಲಕರುಗಳಾದ ಡಾ.ಕೆ. ರಾಜೀವಲೋಚನ, ಚಂದ್ರಿಕಾ ಸುರೇಶ್, ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿ ಮಾರುತಿ ಮೋಹನ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಇವರುಗಳು ವೇದಿಕೆಯಲ್ಲಿದ್ದರು.
ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಬದುಕು-ಬರಹ ಕುರಿತು ಖ್ಯಾತ ಸಂಸ್ಕøತಿ ಚಿಂತಕ ಡಾ.ಜಿ.ಬಿ.ಹರೀಶ್, ಪ್ರಮುಖ ಕೃತಿಗಳ ಅವಲೋಕನ ಕುರಿತು ವಿಮರ್ಶಕಿ ಡಾ.ತಾರಿಣಿ ಶುಭದಾಯಿನಿ, ಪತ್ರಿಕಾ ಬರಹಗಳ ಅವಲೋಕನ ಕುರಿತು ತುಮಕೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಸಿಬಂತಿ ಪದ್ಮನಾಭ ಇವರುಗಳು ವಿಷಯ ಮಂಡಿಸಿದರು.







