ಬೆಂಗಳೂರು; ರಾಜ್ಯದಲ್ಲಿ ಈಗಾಗಲೇ ಮಳೆಗಾಲ ಶುರುವಾಗಿದೆ. ಬೆಳ್ಳಂ ಬೆಳಗ್ಗೆಯೇ ಮಳೆ ಜಿಟಿಜಿಟಿ ಅಂತ ಎಲ್ಲರ ನಿದ್ದೆಯನ್ನು ಕೆಡಿಸುತ್ತಿದೆ. ಎತ್ತು ಹೊಡ್ಕೊಂಡು ಹೊಲದ ಕಡೆ ಹೋಗಿವ ರೈತನಿಗೆ ಖುಷಿಯೇ ಆದರೂ ಕೆಲಸಕ್ಕೆಂದು ಹೊರಡುವ ಜನಕ್ಕೆ ಕಿರಿಕಿರಿಯಾದಂತಾಗಿದೆ. ಇನ್ನು ಐದು ದಿನಗಳ ಕಾಲ ಮಳೆರಾಯ ಬೆಂಬಿಡದೆ ಸುರಿಯುತ್ತಾನೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಇಂದಿ ಬೆಳಗ್ಗೆಯೇ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಮನೆ ಮಾಡಿತ್ತು. ಬೆಳಗ್ಗೆಯಿಂದಾನೂ ಜಿಟಿಜಿಟಿ ಅಂತ ಮಳೆ ಹಿಡಿದುಕೊಂಡಿತ್ತು. ಇಂದು ಕೆಲವೇ ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗಲಿದೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಮಳೆ ಆರ್ಭಟ ಜೋರಾಗಿರಲಿದೆ. ಹೀಗಾಗಿ ಈ ಭಾಗಕ್ಕೆ ಪ್ರವಾಸಕ್ಕೆಂದು ಹೋಗುವ ಜನರು ಎಚ್ಚರದಿಂದ ಇರಬೇಕಾಗಿದೆ.
ಅದರಲ್ಲೂ ಚಿಕ್ಕಮಗಳೂರಿನ ಭಾಗದಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್, ಬಾಳೂರು, ಕೊಟ್ಟಿಗೆಹಾರ, ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಕಳಸ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿರಲಿದೆ. ಚಿಕ್ಕಮಗಳೂರು ಭಾಗದಲ್ಲಿ ಇನ್ನು ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯಾದ್ಯಂತ ಇನ್ನು ಎರಡು ದಿನ ಮಳೆಯ ಅಬ್ಬರ ಜೋರಾಗಿರಲಿದೆ. ಹೀಗಾಗಿ ಹೊರಗೆ ಹೋಗುವ ಜನರು ಕೂಡ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ಮನೆಯಿಂದ ಹೊರಗೆ ಹೋಗುವಾಗ ರೇನ್ ಕೋಟ್, ಕೊಡೆಯನ್ನ ಮರೆಯದೆ ತೆಗೆದುಕೊಂಡು ಹೋಗಿ.





