ಸುದ್ದಿಒನ್, ಹಿರಿಯೂರು,ಮಾರ್ಚ್. 02 : ತಾಲೂಕಿನ ಪಿಲಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಾಳೆ (ಮಾರ್ಚ್ 03 , ಸೋಮವಾರ) ಬೆಳಿಗ್ಗೆ 8.30 ಕ್ಕೆ ಚಿತ್ರದುರ್ಗದ ಜಿಯೋ ರೈನ್ ವಾಟರ್ ಬೋರ್ಡ್ ಅಧ್ಯಕ್ಷರು, ಕರ್ನಾಟಕ ಸರ್ಕಾರದ ಯೋಜನಾ ಮಂಡಳಿಯ ಸದಸ್ಯ, ಅಂತರ್ಜಲ ತಜ್ಞ ಡಾ. ಎನ್. ಜೆ. ದೇವರಾಜ ರೆಡ್ಡಿ ಯವರು ಕೊಳವೆ ಬಾವಿಗೆ (ಮಳೆನೀರು ಕೊಯ್ದು) ಜಲ ಮರುಪೂರಣ ಮಾಡುವ ವಿಧಾನದ ಪ್ರಾತ್ಯಕ್ಷಿತೆಯನ್ನು ಏರ್ಪಡಿಸಲಾಗಿದೆ.

2024ರ ಫೆಬ್ರವರಿಯಲ್ಲಿ ಬತ್ತಿದ ಪ್ರೌಢಶಾಲಾ ಆವರಣದಲ್ಲಿರುವ ಕೊಳವೆ ಬಾವಿಗೆ ಜಲ ಮರುಪೂರಣ ಮಾಡುವ ಪ್ರಾತ್ಯಕ್ಷತೆಯನ್ನು ದಾನಿಗಳ ಸಹಾಯದಿಂದ ಹಮ್ಮಿಕೊಳ್ಳಲಾಗಿತ್ತು. ಕಳೆದ ವರ್ಷ ಶಾಲೆಯ ಬೋರ್ ವೆಲ್ ಬತ್ತಿ ಹೋಗಿ ನೀರಿನ ಕೊರತೆ ಉಂಟಾಗಿದ್ದು, ಬಿಸಿಯೂಟ ತಯಾರಿಕೆಗೆ, ಶೌಚಾಲಯ ಬಳಕೆಗೆ ನೀರಿನ ಕೊರತೆ ಅನುಭವಿಸಲಾಗುತ್ತಿದೆ. ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ನಿಂದ ತಾತ್ಕಾಲಿಕವಾಗಿ ನೀರು ಸರಬರಾಜಾಗುತ್ತಿದ್ದು ನೀರಿನ ಕೊರತೆಯಿಂದ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಅಂತರ್ಜಲ ತಜ್ಞ ಡಾ. ಎನ್ ಜೆ ದೇವರಾಜ ರೆಡ್ಡಿ ಇವರ ಮಾರ್ಗದರ್ಶನದಲ್ಲಿ ಪ್ರೌಢಶಾಲಾ ಆವರಣದಲ್ಲಿರುವ ಕೊಳವೆ ಬಾವಿಗೆ ಜಲ ಮರು ಪೂರಣ ಮಾಡುವ ಕಾರ್ಯಕ್ಕೆ ದಾನಿಗಳ ಸಹಾಯದಿಂದ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ.

ಸುತ್ತ ಮುತ್ತಲಿನ ರೈತರು, ಆಸಕ್ತ ಕೃಷಿಕರು ಭಾಗವಹಿಸಿ ಕೊಳವಿ ಬಾವಿಗೆ ಜಲ ಮರುಪೂರಣ ಮಾಡುವ ತಂತ್ರಜ್ಞಾನವನ್ನು ಉಚಿತವಾಗಿ ತಿಳಿದುಕೊಂಡು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಬಹುದು. ತಮ್ಮ ಸಂದೇಹಗಳಿಗೆ ಸಂವಾದದ ಮೂಲಕ ಪರಿಹಾರವನ್ನು ಪಡೆಯಬಹುದಾಗಿದೆ. ಇದರ ಸದುಪಯೋಗವನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಬೇಕೆಂದು ಮುಖ್ಯಶಿಕ್ಷಕ ಆರ್. ಟಿ. ಎಸ್. ಶ್ರೀನಿವಾಸ್ ತಿಳಿಸಿದ್ದಾರೆ.


