ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 29 : ರಾಜ್ಯ ಸರ್ಕಾರವು 3 ವರ್ಷಗಳಲ್ಲಿ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಹೇಳುತ್ತ 8 ಶಿಕ್ಷಣದ ಗ್ಯಾರಂಟಿಗಳನ್ನು ಘೋಷಿಸಿದೆ. AIDSO, ಈ 8 ಗ್ಯಾರಂಟಿಗಳಿಗೆ 8 ಪ್ರಶ್ನೆಗಳನ್ನು ಕೇಳುತ್ತದೆ.
1ನೇ ಗ್ಯಾರಂಟಿಯಾಗಿ, ಪ್ರಾಥಮಿಕ ಶಾಲೆಗಳಲ್ಲಿ 5ನೇ ತರಗತಿಯವರೆಗೆ ತರಗತಿಗೊಬ್ಬ ಶಿಕ್ಷಕರು ಮತ್ತು 6ನೇ ತರಗತಿಯಿಂದ ವಿಷಯವಾರು ಶಿಕ್ಷಕರನ್ನು ಒದಗಿಸುವುದಾಗಿ ಹೇಳಲಾಗಿದೆ. ಹಾಗಾದರೆ, ರಾಜ್ಯದ 19,536 ಕಿ ಪ್ರಾ ಶಾಲೆಗಳಿಗೆ ಬೇಕಿರುವ 97,680 ಹೊಸ ಶಿಕ್ಷಕರ ನೇಮಕಾತಿ ಯಾವಾಗ?

2ನೇ ಗ್ಯಾರಂಟಿಯಾಗಿ, ಎಲ್ಲಾ ಶಾಲೆಗಳಲ್ಲಿ ಕನ್ನಡದ ಜೊತೆ ಇಂಗ್ಲಿಷ್ ಮಾಧ್ಯಮ ಒದಗಿಸುವರಂತೆ. ಆದರೆ ಕನ್ನಡ ಮತ್ತು ಇಂಗ್ಲಿಷ್ ಗೆ ಪ್ರತ್ಯೇಕ ತರಗತಿಗಳೆಲ್ಲಿದೆ? ಇಂಗ್ಲಿಷ್ ಮಾಧ್ಯಮದಲ್ಲಿ ನುರಿತ ಶಿಕ್ಷಕರೆಲ್ಲಿದ್ದಾರೆ?
ಕೆಪಿಎಸ್ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಎಂಬುದು 3ನೇ ಗ್ಯಾರಂಟಿ. ವಾಸ್ತವದಲ್ಲಿ ಇಂದಿಗೂ ಸರ್ಕಾರಿ ಬಸ್ ಕಾಣದ ಅದೆಷ್ಟೋ ಹಳ್ಳಿಗಳಿವೆ. ಹೀಗಿರುವಾಗ ಈ ಸಾರಿಗೆ ಯಾವ ಶಾಲೆಗಳಿಗೆ ತಲುಪುತ್ತದೆ…?
4ನೇ ಗ್ಯಾರಂಟಿಯಾಗಿ, ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಹಾಗೂ ಮೂರನೇ ತರಗತಿಯಿಂದ ಎಐ ಕಲಿಕೆ ಎಂದು ಹೇಳಲಾಗಿದೆ. ಅಕ್ಷರಾಭ್ಯಾಸ ಕಲಿಸುವ ಹೊತ್ತಲ್ಲಿ ಕಂಪ್ಯೂಟರ್ ಹೇರಿಕೆಯೇಕೆ? ಮಕ್ಕಳನ್ನು ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರವಿಡಬೇಕು ಎಂದು ಒಂದೆಡೆ ಹೇಳುತ್ತಾ ಇದೀಗ ಈ ದ್ವಂದ್ವ ಏಕೆ?
ಸಂಗೀತ, ಕಲೆ ಮತ್ತು ದೈಹಿಕ ಶಿಕ್ಷಣಕ್ಕೆ ಪ್ರತ್ಯೇಕ ಶಿಕ್ಷಕರನ್ನು ನೇಮಿಸುವುದು 5ನೇ ಗ್ಯಾರಂಟಿ. ಆದರೆ 2008ರಿಂದಲೂ ನೆನೆಗುದಿಗೆ ಬಿದ್ದಿರುವ 4000ಕ್ಕೂ ಅಧಿಕ ವಿಶೇಷ ಶಿಕ್ಷಕರ ನೇಮಕಾತಿ ಯಾವಾಗ? ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಶಿಕ್ಷಕರ ಹುದ್ದೆಯೇ ಇಲ್ಲ!
ಬೋಧಕೇತರ ಕೆಲಸಗಳಿಂದ ಶಿಕ್ಷಕರಿಗೆ ಬಿಡುಗಡೆ ನೀಡುವುದು 6ನೇ ಗ್ಯಾರಂಟಿ. ರಾಜ್ಯದ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬೋಧಕೇತರ ಸಿಬ್ಬಂದಿ ನೇಮಕಾತಿ ಯಾವಾಗ?ನೆನಪಿರಲಿ, ಈ ಶಾಲೆಗಳಲ್ಲಿ ಬೋಧಕೇತರ ಹುದ್ದೆಗಳೇ ಇಲ್ಲ!
ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಮೇಲ್ವಿಚಾರಣೆಗೆ ಕಡ್ಡಾಯ ಪೋಷಕರ ಸಭೆ ನಡೆಸುವುದು 7ನೇ ಗ್ಯಾರಂಟಿ. ಶಿಕ್ಷಕರು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಕೇವಲ ಮೇಲ್ವಿಚಾರಣೆಯಿಂದ ಶಿಕ್ಷಣದ ಗುಣಮಟ್ಟ ವೃದ್ಧಿಸುವುದೇ?
8ನೇ ಗ್ಯಾರಂಟಿಯಾಗಿ 6ನೇ ತರಗತಿಯಿಂದಲೇ ವೃತ್ತಿ ಶಿಕ್ಷಣ ನೀಡುವುದಾಗಿ ಸರ್ಕಾರ ಹೇಳಿದೆ. ಅಂದರೆ ಇದು ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ಮೂಲ ವಿಷಯಗಳ ಕಲಿಕೆ ಬಿಡಿಸಿ ಬಡ ರೈತ- ಕಾರ್ಮಿಕರ ಮಕ್ಕಳನ್ನು ಅಗ್ಗದ ಕಾರ್ಮಿಕರನ್ನಾಗಿಸುವ ಹುನ್ನಾರವೇ?
ಈ ಎಲ್ಲ ಗ್ಯಾರಂಟಿಗಳು, ಕೇವಲ ಕೆಪಿಎಸ್ ಶಾಲೆಗಳಲ್ಲಿ ಮಾತ್ರ ಅನುಷ್ಠಾನಗೊಳ್ಳಲಿವೆ. ಹಾಗಾದರೆ, ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ದೇಶದಲ್ಲೇ ಅತ್ಯುತ್ತಮ ಮಾದರಿಯಾಗಿ ರೂಪಿಸುತ್ತೇವೆ ಎಂದು ಹೇಳುತ್ತಿರುವ ಸರ್ಕಾರವು ನಾಡಿನ ಜನತೆಗೆ ವಿಶ್ವಾಸ ದ್ರೋಹ ಮಾಡುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಕೇವಲ ಕೆಪಿಎಸ್ ಅಭಿವೃದ್ಧಿ ಪಡಿಸಿ, ನಮ್ಮೂರ ಶಾಲೆಗಳು ತಾವಾಗಿಯೇ ಮುಚ್ಚುವಂತೆ ಮಾಡಲಾಗುತ್ತದೆಯೇ ಎಂದು ಮಾನ್ಯ ಮುಖ್ಯಮಂತ್ರಿಯವರನ್ನು ರಾಜ್ಯದ ಜನತೆ ಕೇಳುತ್ತಿದ್ದಾರೆ ಎಂದು ಚಿತ್ರದುರ್ಗ AIDSO ನ ಜಿಲ್ಲಾ ಸಂಚಾಲಕ ಈರಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























