ಸುದ್ದಿಒನ್
ವಿಶೇಷ ಲೇಖನ
ರುದ್ರಮೂರ್ತಿ. ಎಂ .ಜೆ
ಚಿತ್ರದುರ್ಗ
ಮೊ : 94486 64932
ನಾಗರಿಕ ಸಮಾಜದ ಸುಸಂಸ್ಕೃತ ಪ್ರಜೆಗಳಾದ ನಾವು ನಮ್ಮ ಮನೆಯ ಇತರ ತ್ಯಾಜ್ಯವನ್ನ ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಸುರವಿ ವಿರೂಪಗೊಳಿಸುವ ಹೊಸ ವಿಧಾನವನ್ನ ಅಳವಡಿಸಿಕೊಂಡಿದ್ದೇವೆ.
ರಸ್ತೆ ಬದಿಯಲ್ಲಿ ಕಸ, ರಸ್ತೆ ತಿರುವಿನಲ್ಲಿ ಕಸ, ಶಾಲೆ ಪಕ್ಕದಲ್ಲಿ ಕಸ, ಹೆದ್ದಾರಿ ಪಕ್ಕದಲ್ಲಿ ಕಸ, ರೈಲ್ವೆ ಕೆಳಸೇತುವೆ ಕೆಳಗೆ ಕಸ, ಎಲ್ಲಿ ನೋಡಿದರೂ ಕಸ..ಕಸ… ಹೀಗೆ ಕಸವನ್ನು ರಸ್ತೆಗೆ ಸುರಿಯಬಾರದೆಂಬ ಕನಿಷ್ಠ ನಾಗರಿಕ ಪ್ರಜ್ಞೆ ಕಳೆದುಕೊಂಡು ಸಿಕ್ಕ ಸಿಕ್ಕಲ್ಲಿ ಕಸ ಹಾಕುವ ಸಾಮಾನ್ಯ ದೃಶ್ಯಗಳನ್ನು ನಾವು ಕಂಡರೂ ಕಾಣದಂತೆ ಕುರುಡರಾಗಿ ಇರಬೇಕಾದ ಅನಿವಾರ್ಯತೆ ಬಂದಿದೆ. ಯಾರಿಗೂ ನೀತಿ ಪಾಠ ಹೇಳುವಂತಿಲ್ಲ. ಹೇಳಿದರೆ ನಿನ್ಯಾರು ಅದನ್ನು ಕೇಳೋಕೆ. ನಿನ್ನದೆಷ್ಟೋ ಅಷ್ಟು ಮಾತ್ರ ನೋಡೊಕೋ ಎಂಬ ಸೊಕ್ಕಿನ ಮಾತುಗಳು…
ಕೆಲ ವರ್ಷಗಳ ಹಿಂದೆ ರಸ್ತೆ ಬದಿಯಲ್ಲಿ ಸಾಲು ಮರಗಳ ಸುಂದರ ನೋಟ ಕಾಣಬಹುದಾಗಿತ್ತು. ಆ ಜಾಗದಲ್ಲೀಗ ಕಸದ ರಾಶಿಯ ದರ್ಶನ ಮುಜುಗರ ಉಂಟುಮಾಡುತ್ತಿದೆ. ಹಾಗೆಯೇ ಮನೆಯಲ್ಲಿ ವಿದ್ಯುತ್ ದೀಪಗಳನ್ನ ನಿಗಧಿತ ಸಮಯಕ್ಕೆ ಹಾಕುವ, ಅದನ್ನ ಅಷ್ಟೇ ಕರುವಕ್ಕಾಗಿ ಆಫ್ ಮಾಡುವ ಜಾಣ್ಮೆ ತೋರುವ ನಾವು, ಮನೆಯ ಮುಂದಿನ ಬೀದಿ ದೀಪ ಅದನ್ನ ಕೆಲವರು ಬೆಳಗ್ಗೆ ಆಫ್ ಮಾಡದೆ ದಿನವಿಡೀ ಬಿಡುವ, ಜವಾಬ್ದಾರಿ ಹೀನರಾಗಿ ವರ್ತಿಸುವ, ಹಗಲು ವೇಳೆಯು ಜ್ಯೋತಿ ನೋಡುವ ಭಾಗ್ಯವಿರುತ್ತದೆ. ಒಂದೆಡೆ ಹಗಲ್ಲೂ ಉರಿಯುವ ದೀಪಗಳು ಕಾಣುತ್ತವೆ. ಮತ್ತೊಂದೆಡೆ ಕತ್ತಲು ಆವರಿಸಿದ ಪ್ರದೇಶದಲ್ಲಿ ಬೀದಿ ದೀಪಗಳು ಇದ್ದರೂ ಸಹಾ ಅವು ಬೆಳಕನ್ನು ಚೆಲ್ಲದೆ ನಿಸ್ತೇಜವಾಗಿ ಮೌನವಾಗಿವೆ.
ಇಷ್ಟೇ ಅಲ್ಲದೇ ಇನ್ನು ನೀರಿನ ವಿಷಯಕ್ಕೆ ಬಂದರೆ, ಇಂದಿನ ದಿನಗಳಲ್ಲಿ ನೀರಿಗೆ ಎಷ್ಟು ಮಹತ್ವವಿದೆ ಎಂಬುದು ಎಲ್ಲಿರಿಗೂ ತಿಳಿದಿದೆ. ಬೇಸಿಗೆ ಬಂತೆಂದರೆ ಸಾಕು ಹನಿ ನೀರಿಗೂ ಹಾಹಾಕಾರ. ಆದರೂ ಕೂಡ ನಾವು ಎಷ್ಟರಮಟ್ಟಿಗೆ ಅಭಿವೃದ್ಧಿ ಹೊಂದಿದ್ದೇವೆ ಎಂದರೆ ಕುಡಿಯುವ ನೀರನ್ನು ಮೋರಿಯಲ್ಲಿ ಹರಿಯಲು ಬಿಟ್ಟು ಬಾಟಲಿ ನೀರನ್ನು ಕೊಂಡುಕೊಳ್ಳಲು ಮಟ್ಟಕ್ಕೆ ಬೆಳೆದಿದ್ದೇವೆ. ನೀರು ಜೀವಜಲ. ಇಡೀ ಜೀವ ಸಂಕುಲಕ್ಕೆ ನೀರೇ ಆಧಾರ. ಅಂತಹ ನೀರು ಎಷ್ಟೊಂದು ಧಾರಾಳವಾಗಿ ಖರ್ಚು ಮಾಡುತ್ತಿದ್ದೇವೆ ಎಂದರೆ ಅದರ ಪರಿವೇ ಇಲ್ಲದಂತೆ ಕುರುಡರಾಗಿ ಜೀವಿಸುತ್ತಿದ್ದೇವೆ. ಎಷ್ಟೋ ಕಡೆ ಪೈಪ್ ಲೈನ್ ಗಳು ಹೊಡೆದು ಹೋಗಿ ನೀರು ವಿಪರೀತವಾಗಿ ಪೋಲು ಆಗುತ್ತಿದ್ದರೂ ಆಡಳಿತ ವ್ಯವಸ್ಥೆ ಜಾಣ ಕುರುಡು ಪ್ರದರ್ಶಿಸುತ್ತದೆ. ನಗರಸಭೆಯ ನೀರು ನಮ್ಮ ಮನೆಯ ತೊಟ್ಟಿಗೆ ಬಂದರೆ ತುಂಬಿ ಹರಿದರೂ ಯಾರೊಬ್ಬರೂ ನೀರನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ಕುಡಿಯುವ ನೀರು ಚರಂಡಿಯಲ್ಲಿ ಕಾಲುವೆಯಲ್ಲಿ ಹರಿದಂತೆ ಹರಿದರೂ ಯಾರೊಬ್ಬರುಗೂ ಕನಿಷ್ಠ ಪ್ರಜ್ಞೆ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮುಂಜಾನೆ ಸಮಯದಲ್ಲಿ ಮನೆಯ ಅಂಗಳಕ್ಕೆ ನೀರು ಹಾಕದೇ ಮನೆ ಮುಂದಿನ ರಸ್ತೆಗೆಲ್ಲಾ ನೀರು ಹಾಕಿ ತಮ್ಮ ಧಾರಾಳತನವನ್ನು ಪ್ರದರ್ಶಿಸುತ್ತಿದ್ದಾರೆ.
ಈಗೀಗ ಬಹುತೇಕರು ದುಡಿಮೆ ಮಾಡುತ್ತಿದ್ದಾರೆ. ಸಂಪಾದನೆಯೂ ಇದೆ. ಇತರೆಗೆ ಆಧ್ಯತೆ ನೀಡಿದಂತೆ ಪ್ರವಾಸಕ್ಕೂ ಪ್ರಾಮುಖ್ಯತೆ ನೀಡುತ್ತಿರುವುದನ್ನ ಕಾಣುತ್ತಿದ್ದೇವೆ.,ದೇಶ,ವಿದೇಶಗಳ ಸುತ್ತಿ ಅಲ್ಲಿನ ವಿಶೇಷತೆ ಬಗ್ಗೆ ಬಾರೀ ಪ್ರಮಾಣದಲ್ಲಿ ಭಾಷಣ ಮಾಡುವ ನಾವು ಅವರಲ್ಲಿನ ಕಾನೂನು ಪರಿಪಾಲನೆಯಾಲಿ, ಸ್ವಚ್ಚತೆ, ಇತರ ಕ್ಷೇತ್ರಗಳಲ್ಲಿನ ಸುಧಾರಣೆಯನ್ನ ಅನುಸರಿಸದೆ, ಸಾರ್ವಜನಿಕ ಸ್ಥಳಗಳನ್ನ ದುರುಪಯೋಗ ಮಾಡುವ ಪರಿ ಯಾರಿಗೆ ಪ್ರೀತಿ.ಸಾರ್ವಜನಿಕ ಆಸ್ತಿ ಪಾಸ್ತಿಯನ್ನ ಕಾಪಾಡುವುದು ಹೋಗಲಿ ಕುಂದುಂಟು ಮಾಡದಿರುವ ಹೊಣೆಗಾರಿಕೆಯೂ ಉಪಕಾರವೇ…!
ಇದನ್ನೆಲ್ಲಾ ನೋಡಿದರೆ ಈ ಆಧುನಿಕ ಕಾಲದಲ್ಲಿ ಪ್ರಜ್ಞಾವಂತ ಪ್ರಜೆ ಎತ್ತ ಸಾಗುತ್ತಿದ್ದಾನೆ ? ಎನ್ನುವ ಪ್ರಶ್ನೆ ಮೂಡುತ್ತದೆ.

