Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡ ಉದ್ವಿಗ್ನತೆ ; ಸಂಯಮ ಕಾಯ್ದುಕೊಳ್ಳುವಂತೆ ಭಾರತ ಕರೆ

---Advertisement---

ದೆಹಲಿ.ಜುಲೈ.09: ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಇರಾನ್ ಮತ್ತು ಅಮೆರಿಕದ ಸೇನಾ ನೆಲೆಗಳ ನಡುವಿನ ಪರಸ್ಪರ ಗುಂಡಿನ ಚಕಮಕಿಗೆ ಕಾರಣವಾದ ಬೆನ್ನಲ್ಲೇ, ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬೆಳವಣಿಗೆಗಳು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುತ್ತಿವೆ ಎಂದು ಭಾರತ ಬುಧವಾರ ಹೇಳಿದೆ.

ಇರಾನ್ ದಾಳಿಗಳ ಹಿನ್ನೆಲೆಯಲ್ಲಿ ಕದನ ವಿರಾಮ ಕೊನೆಗೊಂಡಿದೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಮತ್ತೊಂದು ಸುತ್ತಿನ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಈ ಹೇಳಿಕೆ ಬಿಡುಗಡೆ ಮಾಡಿದೆ.

ವಿಶೇಷವೆಂದರೆ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕುವೈತ್, ಕತಾರ್, ಓಮನ್ ಮತ್ತು ಬಹ್ರೇನ್ ಸೇರಿದಂತೆ ಪಶ್ಚಿಮ ಏಷ್ಯಾದ ನಾಲ್ಕು ದೇಶಗಳ ಪ್ರವಾಸದಲ್ಲಿರುವಾಗಲೇ ಈ ಬೆಳವಣಿಗೆ ನಡೆದಿದೆ.

ವಿದೇಶಾಂಗ ಸಚಿವಾಲಯದ ಪ್ರಕಟಣೆ:
“ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ದಾಳಿಗಳು ಮತ್ತು ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ತೀವ್ರ ಕಳವಳ ಹೊಂದಿದೆ. ಈ ಬೆಳವಣಿಗೆಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಧಕ್ಕೆ ತರುವ ಅಪಾಯವನ್ನು ಹೊಂದಿವೆ.” ಎಂದು ಎಂಇಎ ತಿಳಿಸಿದೆ.

ಸಂಘರ್ಷದಲ್ಲಿ ತೊಡಗಿರುವ ಎಲ್ಲಾ ದೇಶಗಳು ತಕ್ಷಣವೇ ಸಂಯಮ ಕಾಯ್ದುಕೊಳ್ಳಬೇಕು, ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು ಮತ್ತು ನಾಗರಿಕರ ರಕ್ಷಣೆಯನ್ನು ಖಚಿತಪಡಿಸಬೇಕು ಎಂದು ಭಾರತ ಕರೆ ನೀಡಿದೆ. ಇದರೊಂದಿಗೆ ಜಾಗತಿಕ ಇಂಧನ ಪೂರೈಕೆ ಮತ್ತು ವಾಣಿಜ್ಯದ ಸುಗಮ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜತಾಂತ್ರಿಕತೆ ಮತ್ತು ಮಾತುಕತೆಗೆ ಮರಳಬೇಕು ಎಂದು ಭಾರತ ಒತ್ತಾಯಿಸಿದೆ.

ಯುದ್ಧದ ತೀವ್ರತೆ ಮತ್ತು ಜೈಶಂಕರ್ ಪ್ರವಾಸ:
ಕಳೆದ ಫೆಬ್ರವರಿ 28 ರಂದು ಯುದ್ಧದ ಆರಂಭಿಕ ಹಂತದಲ್ಲೇ ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಹತರಾಗಿದ್ದರು. ಅವರ ದಿನಗಳ ಕಾಲದ ಅಂತ್ಯಕ್ರಿಯೆಯ ನಂತರ ಅಂತಿಮ ಒಪ್ಪಂದಕ್ಕೆ ಮಾತುಕತೆಗಳು ನಡೆಯಬೇಕಿತ್ತು. ಆದರೆ ಮಂಗಳವಾರ ಮೂರು ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆದ ನಂತರ, ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿಕಾರವಾಗಿ ಇರಾನ್ ಪಡೆಗಳು ಗಲ್ಫ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿವೆ.

ಇರಾನ್ನ ಬಂದರ್ ಮಾಹ್ಶಹರ್ ಮತ್ತು ಬುಶೆಹರ್ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರ ಸಂಕೀರ್ಣ ಸೇರಿದಂತೆ ಹಲವು ಕಡೆಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಇತ್ತ ಅಮೆರಿಕದ ನೌಕಾಪಡೆಯ 5ನೇ ಫ್ಲೀಟ್ ಇರುವ ಬಹ್ರೇನ್ ಮತ್ತು ಯುಎಸ್ ಸೇನಾ ನೆಲೆ ಹೊಂದಿರುವ ಕುವೈತ್ಗಳಲ್ಲಿ ಕ್ಷಿಪಣಿ ಮುನ್ನೆಚ್ಚರಿಕೆ ಸೈರನ್ಗಳು ಮೊಳಗಿವೆ. ಎರಡೂ ದೇಶಗಳಲ್ಲಿನ ಯುಎಸ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿರುವುದನ್ನು ಇರಾನ್ನ ರೆವಲ್ಯೂಷನರಿ ಗಾರ್ಡ್ ಒಪ್ಪಿಕೊಂಡಿದೆ.

ಪ್ರಸ್ತುತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಜುಲೈ 5 ರಿಂದ 15 ರವರೆಗೆ ಆರು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಯುದ್ಧ ಪೀಡಿತ ಕತಾರ್, ಬಹ್ರೇನ್, ಕುವೈತ್ ಮತ್ತು ಓಮನ್ ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಇದಾದ ನಂತರ ಅವರು ಅಮೆರಿಕ ಮತ್ತು ಬೆಲ್ಜಿಯಂಗೆ ತೆರಳಲಿದ್ದಾರೆ. ಈ ಎಲ್ಲಾ ಗಲ್ಫ್ ದೇಶಗಳು ದಶಕಗಳಿಂದ ಅಮೆರಿಕದ ಮಿಲಿಟರಿ ನೆಲೆಗಳಿಗೆ ಆತಿಥ್ಯ ನೀಡುತ್ತಿದ್ದು, ಇರಾನ್ನ ಪ್ರತಿಕಾರದ ದಾಳಿಗೆ ತುತ್ತಾಗಿವೆ.

Join WhatsApp

Join Now

Join Telegram

Join Now