ಜೈಪುರ: ಕೇವಲ ಸರ್ಕಾರಿ ಕೆಲಸ ಮತ್ತು ಕುಟುಂಬದ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಹೆತ್ತ ಮಗಳೇ ಸುಪಾರಿ ಕೊಟ್ಟು ತಾಯಿಯನ್ನು ಕಾರು ಹರಿಸಿ ಕೊಲೆ ಮಾಡಿಸಿರುವ ಭೀಕರ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ. ರಸ್ತೆ ಅಪಘಾತದಂತೆ ಬಿಂಬಿಸಲು ಯತ್ನಿಸಿದ ಈ ವ್ಯವಸ್ಥಿತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 23 ವರ್ಷದ ಮಗಳು ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಿದ್ದಾರೆ.
ಕೊಲೆಯಾದ ದುರ್ದೈವಿಯನ್ನು 45 ವರ್ಷದ ನೀರಜ್ ಶರ್ಮಾ ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ನ್ಯಾಯಾಲಯವೊಂದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (LDC) ಆಗಿ ಕೆಲಸ ಮಾಡುತ್ತಿದ್ದರು. ಜುಲೈ 3 ರಂದು ಜೈಪುರದ ಪ್ರತಾಪ್ ನಗರ ಪ್ರದೇಶದಲ್ಲಿ ನೀರಜ್ ಅವರು ತಮ್ಮ ಮಗನನ್ನು ಕೋಚಿಂಗ್ ಸೆಂಟರ್ಗೆ ಬಿಟ್ಟು ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಸುಮಾರು 130 ಕಿಲೋಮೀಟರ್ ವೇಗದಲ್ಲಿ ಬಂದ ಸ್ಕಾರ್ಪಿಯೋ ಎಸ್ಯುವಿ ಕಾರು ಇವರಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನೀರಜ್ ಅವರು ಗಾಳಿಯಲ್ಲಿ ಸುಮಾರು 100 ಅಡಿ ದೂರಕ್ಕೆ ಹಾರಿ ಬಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಕೃತ್ಯದ ಬಳಿಕ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದನು.
ಆರಂಭದಲ್ಲಿ ಇದನ್ನು ಕೇವಲ ‘ಹಿಟ್ ಅಂಡ್ ರನ್’ ಅಪಘಾತದ ಪ್ರಕರಣ ಎಂದು ಭಾವಿಸಲಾಗಿತ್ತು. ಆದರೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇದು ಆಕಸ್ಮಿಕ ಅಪಘಾತವಲ್ಲ ಮತ್ತು ಉದ್ದೇಶಪೂರ್ವಕವಾಗಿ ನಡೆಸಿರುವ ಕೊಲೆ ಎಂಬ ಗಂಭೀರ ಸುಳಿವು ಸಿಕ್ಕಿತು. ಈ ನಿಟ್ಟಿನಲ್ಲಿ ತನಿಖೆಯನ್ನು ತೀವ್ರಗೊಳಿಸಿದಾಗ ಸ್ವೀTarget ತಾಯಿಯ ಕೊಲೆಗೆ ಮಗಳು ಆಯುಷಿ ಶರ್ಮಾ ಅವರೇ ಕುಟುಂಬದ ಇತರರೊಂದಿಗೆ ಸೇರಿ ಸಂಚು ರೂಪಿಸಿರುವುದು ಬಹಿರಂಗಗೊಂಡು ಪೊಲೀಸರೇ ದಿಗಿಲುಬೀಳುವಂತೆ ಮಾಡಿದೆ.
ಪೊಲೀಸ್ ಉಪ ಕಮಿಷನರ್ ರಂಜಿತಾ ಶರ್ಮಾ ನೀಡಿರುವ ಮಾಹಿತಿ ಪ್ರಕಾರ, ನೀರಜ್ ಶರ್ಮಾ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಪತಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ನೀರಜ್ ಅವರಿಗೆ ನ್ಯಾಯಾಲಯದಲ್ಲಿ ಕ್ಲರ್ಕ್ ಕೆಲಸ ಸಿಕ್ಕಿತ್ತು. ಆದರೆ ಮಗಳು ಆಯುಷಿ ಶರ್ಮಾಗೆ ಆ ಸರ್ಕಾರಿ ಕೆಲಸ ತನಗೇ ಸಿಗಬೇಕೆಂಬ ಹಠವಿತ್ತು. ತಾಯಿ ಆ ಕೆಲಸಕ್ಕೆ ಸೇರಿದಾಗಿನಿಂದ ಮಗಳಿಗೆ ತೀವ್ರ ಅಸಮಾಧಾನವಿತ್ತು. ಇದರೊಂದಿಗೆ ಕಳೆದ ಎರಡು-ಮೂರು ವರ್ಷಗಳಿಂದ ತಾಯಿ-ಮಗಳ ನಡುವೆ ಆಸ್ತಿ ವಿವಾದವೂ ತಾರಕಕ್ಕೇರಿತ್ತು. ತಾಯಿಯನ್ನು ಮುಗಿಸಿದರೆ ಆಸ್ತಿ ಮತ್ತು ಅನುಕಂಪದ ಸರ್ಕಾರಿ ಕೆಲಸ ಎರಡೂ ತನಗೆ ಸಿಗುತ್ತದೆ ಎಂದು ಆಯುಷಿ ಕ್ರೂರ ಯೋಜನೆ ರೂಪಿಸಿದ್ದಳು.
ತಾಯಿಯನ್ನು ಕೊಲ್ಲಲು ಆಯುಷಿ ತನ್ನ ಮಾವ ಮೋಹನ್ ಸ್ವರೂಪ್ ಮತ್ತು ಸೋದರಸಂಬಂಧಿ ಬಲರಾಮ್ ಯಾನೆ ರವಿ ಜೊತೆ ಕೈಜೋಡಿಸಿದ್ದಳು. ಇವರೆಲ್ಲರೂ ಸೇರಿ ಭರತ್ಪುರ ಮೂಲದ ಹೇಮಂತ್ ಶರ್ಮಾ ಎಂಬಾತನಿಗೆ ಕೊಲೆ ಮಾಡಲು 7 ಲಕ್ಷ ರೂಪಾಯಿ ಸುಪಾರಿ ನೀಡಿದ್ದರು. ಕೊಲೆಗೂ ಮುನ್ನ ಆರೋಪಿಗಳು ಬಾಡಿಗೆ ಥಾರ್ ಕಾರಿನಲ್ಲಿ ನೀರಜ್ ಅವರ ಚಲನವಲನಗಳನ್ನು ಗಮನಿಸಿದ್ದರು. ಆದರೆ ಆ ಯತ್ನ ವಿಫಲವಾದಾಗ, ಸತತ ಒಂದು ತಿಂಗಳ ಕಾಲ ಅವರ ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸಿ ಅಂತಿಮವಾಗಿ ಜುಲೈ 3 ರಂದು ಸ್ಕಾರ್ಪಿಯೋ ಕಾರಿನಿಂದ ಡಿಕ್ಕಿ ಹೊಡೆಸಿ ಕೃತ್ಯ ಎಸಗಿದ್ದಾರೆ. ಕೃತ್ಯದ ಬಳಿಕ ಕಾರನ್ನು ಅಲ್ಲೇ ಬಿಟ್ಟು ಬೈಕ್ನಲ್ಲಿ ಪರಾರಿಯಾಗಿದ್ದರು.
ನೀರಜ್ ಅವರ ಸಹೋದರ ರಾಕೇಶ್ ಕುಮಾರ್ ಶರ್ಮಾ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮುಖ್ಯ ಆರೋಪಿ ಆಯುಷಿ ಶರ್ಮಾ, ಮಾವ ಮೋಹನ್ ಸ್ವರೂಪ್, ಮೋಹಿತ್ ಶರ್ಮಾ, ಆಕಾಶ್ ಶರ್ಮಾ, ಅರವಿಂದ್ ಶರ್ಮಾ, ಹೇಮಂತ್ ಶರ್ಮಾ ಮತ್ತು ರೋಹಿತ್ ಜಾತವ್ ಅವರನ್ನು ಬಂಧಿಸಿದ್ದಾರೆ. ಕೃತ್ಯದ ಪ್ರಮುಖ ಸೂತ್ರಧಾರಿಯಾದ ಸೋದರಸಂಬಂಧಿ ಬಲರಾಮ್ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.











