ಸುದ್ದಿಒನ್, ಹಿರಿಯೂರು, ಜುಲೈ. 13 : ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ನಾಳೆ ಸೋಮವಾರದಿಂದ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ನಾಳೆ ಸೋಮವಾರ ಬೆಳಗ್ಗೆ 8 ಗಂಟೆಗೆ ಕರಿಯಮ್ಮ ದೇವಿಯನ್ನು ಗರ್ಭಗುಡಿಯಿಂದ ಹೊರ ತಂದು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು, ಕೂಡಲ ಸಂಗಮದ ವೇದಾವತಿ ನದಿಯಲ್ಲಿ ಗಂಗಾಪೂಜೆ ನೇರವೇರಿಸಿಲಾಗುತ್ತಿದೆ. ಬಳಿಕ ಗ್ರಾಮಕ್ಕೆ ಮೆರವಣಿಗೆ ಮೂಲಕ ಹಿಂದುರುಗಿ, ದೇವಸ್ಥಾನದಲ್ಲಿ ಗದ್ದಿಗೆಯಾಗುವುದು. ಮಂಗಳವಾರ ಬೆಳಗ್ಗೆ ದೇವಿಗೆ ವಿಶೇಷ ವಿವಿಧ ಹೂವುಗಳ ಅಲಂಕರಿಸಿ, ಪೂಜೆ ಸಲ್ಲಿಸಲಾಗುವುದು. ಬಳಿಕ ಮಸ್ಕಲ್, ಟಿಬಿ ಗೊಲ್ಲರಹಟ್ಟಿ, ಚಿತ್ರದೇವರಹಟ್ಟಿ, ಮಲ್ಲೇಣು, ಮಟ್ಟಿ , ಪುಟ್ಟಯ್ಯನಕಟ್ಟೆ ಗ್ರಾಮಸ್ಥರಿಂದ ಪೂಜೆ ಸಲ್ಲಿಸಿ, ಮಹಿಳೆಯರಿಂದ ತುಂಬಿಟ್ಟಿನ ಆರತಿ ಬೆಳಗುವ ಕಾರ್ಯಕ್ರಮ ನೆರವೇರಲಿದೆ.
ಮೂರು ವರ್ಷಗಳ ಬಳಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಹಬ್ಬದ ಅಂಗವಾಗಿ ಮಂಗಳವಾರ ರಾತ್ರಿ 9 ಗಂಟೆಗೆ ಮಸ್ಕಲ್, ಮಲ್ಲೇಣು ಹಾಗೂ ಚಿತ್ರದೇವರಹಟ್ಟಿ ಗ್ರಾಮದಲ್ಲಿ ಶ್ರೀ ದೇವಿ ಮಹಾತ್ಮೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ದೇವಸ್ಥಾನಕ್ಕೆ ಸೇರಿದ ಎಲ್ಲಾ ಕೈವಾಡಸ್ಥರು ತಿಳಿಸಿದ್ದಾರೆ.















