ಬಳ್ಳಾರಿ: ಬ್ಯಾನರ್ ಕಟ್ಟುವ ವೇಳೆ ನಡೆದ ಅವಘಡದಿಂದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಪ್ರಾಣವೇ ಹೋಗಿದೆ. ಬೆಳೆದು ನಿಂತ ಮಗ, ಮದುವೆ ಮಾಡಬೇಕೆಂದು ಕನಸು ಕಂಡಿದ್ದ ತಾಯಿಗೆ ಈ ಸಾವನ್ನ ಸಹಿಸುವುದು ಅಷ್ಟು ಸುಲಭವಾ..? ಮಗನ ಸಾವಿಗೆ ತಾಯಿ ಕಣ್ಣೀರಾಕುತ್ತಾ ಕೂತಿದ್ದಾರೆ.
ಬಳ್ಳಾರಿ ವಿಮ್ಸ್ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಯೂ ಮುಗಿದಿದೆ. ಮಗನ ಸಾವಿನ ಸುದ್ದಿ ಕೇಳಿ ಓಡಿ ಬಂದ ತಾಯಿ, ಮಗನ ಜೀವ ಹೋಗಿದೆ. ನಮ್ಮ ಪಾಡಿಗೆ ನಾವು ಇದ್ದೆವು. ಅಂಗಡಿ ಇಟ್ಟುಕೊಂಡು ಹೇಗೋ ಜೀವನ ನಡೆಸುತ್ತಿದ್ದೆವು. ಭರತ್ ರೆಡ್ಡಿ ಹಿಂದೆ ಮಗ ಓಡಾಡುತ್ತಿದ್ದ. ನನ್ನ ಮಗನಿಗೆ ಅಪಘಾತವಾಗಿದೆ ಎಂದು ಇಲ್ಲಿಗೆ ಕರೆದುಕೊಂಡು ಬಂದರು. ಆದರೆ ಇಲ್ಲಿ ಬಂದು ನೋಡಿದ್ರೆ ಈ ರೀತಿ ಆಗಿದೆ ಎಂದು ಶವಗಾರದ ಮುಂದೆಯೇ ಕಣ್ಣೀರು ಹಾಕುತ್ತಾ ಕೂತಿದ್ದಾರೆ. ನಾಲ್ವರು ಮಕ್ಕಳಲ್ಲಿ ರಾಜಕಾರಣದಿಂದ ಒಬ್ಬ ಮಗನನ್ನು ಕಳೆದುಕೊಂಡು ಆ ತಾಯಿ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ.

ಮೃತ ರಾಜಶೇಖರ್ ಪೋಷಕರು ಕಂಗಾಲಾಗಿದ್ದಾರೆ. ಮನೆಯಲ್ಲಿ ನಾಲ್ವರು ಮಕ್ಕಳಿದ್ದರು. ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಹೆಣ್ಣು ಮಕ್ಕಳಿಗೆ ಮದುವೆ ಆಗಿತ್ತು, ಇಬ್ಬರು ಗಂಡು ಮಕ್ಕಳಿಗೆ ಮದುವೆ ಮಾಡಬೇಕೆಂಬ ಕನಸ್ಸನ್ನ ಹೊತ್ತಿದ್ದರು. ಅಂಗಡಿಯನ್ನ ಇಟ್ಟುಕೊಂಡು ಸಂಸಾರ ನಡೆಸಿಕೊಂಡು ಹೋಗ್ತಾ ಇದ್ರು. ನೆಮ್ಮದಿಯಾಗಿದ್ದ ಬದುಕಲ್ಲಿ ಇಂದು ಬಿರುಗಾಳಿಯೇ ಬೀಸಿದೆ. ಮದುವೆ ಮಾಡಿ, ಮೊಮ್ಮಕ್ಕಳನ್ನ ನೋಡಬೇಕೆಂಬ ಆಸೆ ಹೊತ್ತಿದ್ದ ಆ ತಾಯಿಗೆ ಇಂದು ಮಗನ ದೇಹಕ್ಕೆ ತಾನೇ ಮಣ್ಣು ಹಾಕುವ ಸ್ಥಿತಿ ಬಂದಿದೆ. ಆ ತಾಯಿ ಹೃದಯಕ್ಕೆ ಈ ನೋವು ಸಹಿಸುವ ಶಕ್ತಿಯನ್ನ ಆ ಭಗವಂತನೇ ಕರುಣಿಸಬೇಕು.


















