ಮೈಸೂರು: ನಿರ್ಮಾಪಕ ಸಂದೇಶ್ ನಾಗರಾಜ್ ಬಿಜೆಪಿಯಲ್ಲಿದ್ದು, ತಮ್ಮ ಪಕ್ಷದ ವಿರುದ್ಧವೇ ಬೇಸರ ಹೊರ ಹಾಕಿದ್ದಾರೆ. ಹೆಚ್ ವಿಶ್ವನಾಥ್ ಅವರ ವಿಚಾರವನ್ನು ತೆಗೆದು ಅವರಿಗೂ ಮೋಸ ಮಾಡುತ್ತಿದೆ, ನನಗೂ ಬಿಜೆಪಿ ಮೋಸ ಮಾಡಿದೆ. ಹೀಗಾಗಿ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಾಗರಾಜ್ ಅವರು, ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಮೋಸ ಮಾಡಿದರು. ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಮೋಸ ಮಾಡುವುದರಲ್ಲಿ ಬಿಜೆಪಿ ನಂಬರ್ ಒನ್ ಆಗಿದೆ. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಒಳ್ಳೆಯತನದಿಂದಾನೇ ಮುಗಿಸಿದರು. ಅವರನ್ನು ಮುಗಿಸಿದ ಮೇಲೆಯೇ ಬಿಜೆಪಿಗೆ 40 ಪರ್ಸೆಂಟ್ ಕಡಿಮೆಯಾಗಿದ್ದು.
ನನಗೂ ಮೋಸ ಮಾಡುತ್ತಿದ್ದಾರೆ. ನನಗೆ ಬಿಜೆಪಿ ಸಹವಾಸವೇ ಬೇಡ. ನಾನು ಕಾಂಗ್ರೆಸ್ ಸೇರುವುದಕ್ಕೆ ನಿರ್ಧಾರ ಮಾಡಿದ್ದೇನೆ. ಈಗಾಗಲೇ ಈ ಸಂಬಂಧ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದೇನೆ. ಡಿಕೆ ಶಿವಕುಮಾರ್ ಬಳಿಯೂ ಮಾತನಾಡುತ್ತೇನೆ. ಬಿಜೆಪಿಯವರದ್ದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಕೆಲಸ ಎಂದು ಹರಿಹಾಯ್ದಿದ್ದಾರೆ.