ಬೆಂಗಳೂರು: ಮಾಜಿ ಸಚಿವ ಹಾಗೂ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಪುಟ್ಟಸ್ವಾಮಿ ಅವರು ಅದ್ಯಾಕೋ ರಾಜಕೀಯ ಬಿಟ್ಟು ಮಠ ಸೇರಿಕೊಳ್ಳಲು ಸಿದ್ಧರಾಗಿದ್ದಾರೆ. ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿಯಲ್ಲಿರುವ ಮಠಕ್ಕೆ ಮಠಾಧೀಶರಾಗಲು ಹೊರಟಿದ್ದಾರೆ. ಪುಟ್ಟಸ್ವಾಮಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದವರು. ಆದ್ರೆ ಈಗ ಪೂರ್ಣಾನಂದ ಸ್ವಾಮೀಜಿಯಾಗಲಿದ್ದಾರೆ.
ಮಾದನಾಯಕನಹಳ್ಳಿಯ ತೈಲೇಶ್ವರ ಗಾಣಿಗರ ಸಂಸ್ಥಾಪನ ಮಠಕ್ಕೆ ಮೊದಲ ಪೀಠಾಧಿಪತಿಯಾಗಲಿದ್ದಾರೆ. ರಾಜಕೀಯಕ್ಕೆ ರಾಜೀನಾಮೆ ನೀಡಿ ತಮ್ಮ 82 ವರ್ಷಕ್ಕೆ ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಸದ್ಯ ಇರುವ ಸ್ಥಾನವನ್ನು ಶೀಘ್ರದಲ್ಲೆ ತೊರೆಯಲಿದ್ದಾರೆ. ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಮೇ 6ರಂದು ಸನ್ಯಾಸತ್ವ ದೀಕ್ಷೆ ಪಡೆಯಲಿದ್ದಾರೆ. ಮೇ 15ಕ್ಕೆ ಪಟ್ಟಾಭಿಷೇಕ ನಡೆಯಲಿದೆ. ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಈ ಸಂಬಂಧ ಮಾತನಾಡಿರುವ ಪುಟ್ಟಸ್ವಾಮಿ ಅವರು, ಇದು ದಿಢೀರ್ ಎಂದು ತೆಗೆದುಕೊಂಡ ನಿರ್ಧಾರವಲ್ಲ. ಜೀವಮಾನದಲ್ಲಿ ಗಾಣಿಗ ಸಮುದಾಯಕ್ಕೆ ಏನಾದರೂ ಮಾಡಬೇಕು ಮತ್ತು ಶಾಶ್ಚತವಾದ ಸಂಸ್ಥೆಯೊಂದನ್ನು ಕಟ್ಟಬೇಕು ಎಂಬ ಮಹತ್ವಾಕಾಂಕ್ಷೆಯಿತ್ತು. 1972ರಲ್ಲಿ ಗಾಣಿಗ ಸಮುದಾಯದ ಒಳಪಂಗಡಗಳನ್ನು ಸೇರಿಸಿ ಸಂಘ ಸ್ಥಾಪಿಸಿ ಅದಕ್ಕೆ ಅಧ್ಯಕ್ಷನಾಗಿದ್ದೆ. ಎಲ್ಲರಲ್ಲಿಯೂ ಸಾಮರಸ್ಯ ಮೂಡಿಸಿದ್ದೆ. ಈಗ ಪೀಠಾಧಿಪತಿಯಾಗುತ್ತಿದ್ದೇನೆ. ಇನ್ನಷ್ಟು ಅಭಿವೃದ್ಧಿ ಮಾಡಬೇಕು ಎಂದಿದ್ದಾರೆ.