ಚಿತ್ರದುರ್ಗ. ಆ.20: ಪಿ.ಎಂ.ಕಿಸಾನ್ ಯೋಜನೆಯಡಿ ನಕಲಿ ಫಲಾನುಭವಿಗಳನ್ನು ತಡೆದು, ಪಾರದರ್ಶಕವಾಗಿ ಹಣ ಜಮೆ ಮಾಡಲು ಹಾಗೂ ಮುಂದಿನ ಕಂತಿನ ಹಣ ಪಡೆಯಲು ಕೇಂದ್ರ ಸರ್ಕಾರ ಬಯೋಮೆಟ್ರಿಕ್ ಫೇಸ್ ಆಧಾರಿತ ಇ-ಕೆವೈಸಿ ಕಡ್ಡಾಯಗೊಳಿಸಿದೆ.
ಇ-ಕೆವೈಸಿ ಮಾಡಿಸದಿದ್ದರೆ ಮುಂದಿನ ಕಂತಿನ ಹಣದಿಂದ ವಂಚಿತರಾಗಬೇಕಾಗುತ್ತದೆ. ಯೋಜನೆಯ 24ನೇ ಕಂತಿನ ಹಣ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಕೇಂದ್ರದ ಯೋಜನೆಯಡಿ ಪ್ರತಿ 4 ತಿಂಗಳಿಗೊಮ್ಮೆ 2,000 ರೂ. ನಂತೆ ವಾರ್ಷಿಕವಾಗಿ 3 ಕಂತುಗಳಲ್ಲಿ 6,000 ರೂ. ನೇರ ನಗದು ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಹಣ ಸೇರುತ್ತಿದ್ದರೂ ಈ ಬಾರಿ ಕಂತು ಬಿಡುಗಡೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ನ್ನು ಎನ್ಪಿಸಿಐ ಜತೆ ಲಿಂಕ್ ಮಾಡಿಸಿದ್ದರೂ ಈ ಸಲ ಪ್ರತಿಯೊಬ್ಬ ಫಲಾನುಭವಿ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿ ಮಾಡಿಸಬೇಕು. ಈ ಮೂಲಕ ಮೃತರನ್ನು ಕೈಬಿಟ್ಟು ಅರ್ಹ ಫಲಾನುಭವಿಗಳ ಪತ್ತೆಗೆ ಸರಕಾರ ಮುಂದಾಗಿದೆ.
ಈ ಹಿಂದೆ ರೈತರು ಆಧಾರ್ ಒಟಿಪಿ ಆಧಾರಿತ ಇ-ಕೆವೈಸಿ ಮಾಡಿಸುತ್ತಿದ್ದರು. ಇದರಿಂದ ಮೃತಪಟ್ಟ ಖಾತೆದಾರರ ಅಥವಾ ಫಲಾನುಭವಿಗಳ ಖಾತೆಗೂ ಹಣ ವರ್ಗಾವಣೆಕೊಂಡ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಾಗಿ ಕೇಂದ್ರ ಸರ್ಕಾರ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿಗೆ ಮಾತ್ರ ಅವಕಾಶ ನೀಡಿ, ಒಟಿಪಿ ಆಧಾರಿತ ಇ-ಕೆವೈಸಿಗೆ ಕಡಿವಾಣ ಹಾಕಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 1,51,693 ಫಲಾನುಭವಿಗಳಿದ್ದು, ಈ ಪೈಕಿ 1,51,498 ರೈತರ ಇ-ಕೆವೈಸಿ ಬಾಕಿ ಉಳಿದಿದೆ. ತಾಲ್ಲೂಕುವಾರು ಬಾಕಿ ವಿವರ ಇಂತಿದೆ. ಚಿತ್ರದುರ್ಗದಲ್ಲಿ 31,736, ಚಳ್ಳಕೆರೆಯಲ್ಲಿ 33,846, ಹಿರಿಯೂರಿನಲ್ಲಿ 24,875, ಹೊಳಲ್ಕೆರೆಯಲ್ಲಿ 25,895, ಹೊಸದುರ್ಗದಲ್ಲಿ 24,023 ಹಾಗೂ ಮೊಳಕಾಲ್ಮೂರಿನಲ್ಲಿ 11,123 ಫಲಾನುಭವಿಗಳ ಇ-ಕೆವೈಸಿ ಬಾಕಿ ಇದೆ.
ರೈತರು ಸಾಮಾನ್ಯ ಸೇವಾ ಕೇಂದ್ರಗಳು, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಮುಖ ದೃಢೀಕರಣ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಲು ಪ್ರತಿ ಗ್ರಾಮದ ವಿಲ್ಲೇಜ್ ನೋಡಲ್ ಆಫೀಸರ್ಗಳಾದ ಕೃಷಿ ಸಖಿ, ಪಶು ಸಖಿ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಹಾಗೂ ರೈತರು ಸ್ವತಃ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು.
ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುತ್ತದೆ. ಹಾಗೂ ಈhttps://play.google.com/store/apps/details?id=com.nic.project.pmkisan
ಲಿಂಕ್ ಬಳಸಿ ರೈತರು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.
==========











