ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 20 : ಆರೋಪಿಗಳನ್ನು ಬಂಧಿಸುವ ಬದಲು ದೂರುದಾರ ಬಸವರಾಜ್ಗೆ ಮಾನಸಿಕವಾಗಿ ಕಿರುಕುಳ ನೀಡಿರುವ ಚಿತ್ರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಶ್ವಿನಿ ಇವರನ್ನು ಕೂಡಲೆ ಸೇವೆಯಿಂದ ಅಮಾನತ್ತುಗೊಳಿಸುವಂತೆ ಕರುನಾಡ ವಿಜಯಸೇನೆಯಿಂದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ನಗರ ಠಾಣೆ ಇನ್ಸ್ಪೆಕ್ಟರ್ಗೆ ಮನವಿ ಸಲ್ಲಿಸಲಾಯಿತು.
ಆರೋಪಿಗಳಾದ ಪವನ್, ಆಕಾಶ್ ಕಡೆಮನಿ ಇವರುಗಳೊಂದಿಗೆ ಶ್ಯಾಮೀಲಾಗಿ ಬಸವರಾಜ್ರವರನ್ನು ಠಾಣೆಗೆ ಕರೆಸಿ ಜೀಪಿನಲ್ಲಿ ಕೂರಿಸಿಕೊಂಡು ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊರ ಪ್ರದೇಶಗಳಲ್ಲಿ ಸುತ್ತಾಡಿಸಿ ದೂರುದಾರ ಜಯಪ್ಪನವರಲ್ಲಿದ್ದ ಮೊಬೈಲ್ ಕಸಿದುಕೊಂಡು ಫೋನ್ ಮಾಡಲು ಅವಕಾಶ ನೀಡದೆ ಪಿ.ಎಸ್.ಐ. ಅಧಿಕಾರ ದುರುಪಯೋಗಪಡಿಸಿಕೊಂಡಿರುತ್ತಾರೆ.
ಹೊಳಲ್ಕೆರೆಯ ಸಂದೀಪಿನಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜಯಪ್ಪನ ಪುತ್ರಿ ಶಾಲೆ ಮುಗಿದ ತಕ್ಷಣ ಬಸ್ನಲ್ಲಿ ಕೂತಿದ್ದಾಗ ಪವನ್ ಮತ್ತು ಆಕಾಶ್ ಕಡೆಮನೆ ಇವರುಗಳು ಬಸ್ನಲ್ಲಿದ್ದ ಶಿಕ್ಷಕರುಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ತಂದೆ ಸಿಗುವವರೆಗೂ ನಮ್ಮ ಜೊತೆಯಲ್ಲಿರಬೇಕೆಂದು ಬಾಲಕಿಯನ್ನು ಹೆದರಿಸಿದ್ದಾರೆ. ಆರೋಪಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಿ.ಎಸ್.ಐ. ಅಶ್ವಿನಿ ಇವರನ್ನು ಅಮಾನತ್ತುಪಡಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಯಪ್ಪನವರ ಕುಟುಂಬದೊಂದಿಗೆ ಜಿಲ್ಲಾ ಪೊಲೀಸ್ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ನಗರಾಧ್ಯಕ್ಷ ಅವಿನಾಶ್, ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ಮುಜಾಹಿದ್, ತಿಪ್ಪೇಸ್ವಾಮಿ, ಅಣ್ಣಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.











