ಚಿತ್ರದುರ್ಗ. ಜುಲೈ. 02: ಪ್ರಾಣ ಉಳಿಸುವ ವೈದ್ಯರ ಸೇವೆ ಅನನ್ಯ ಎಂದು ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಹೇಳಿದರು.
ನಗರದ ಸೌಖ್ಯ ಹೆಲ್ತ್ ಅಂಡ್ ಸ್ಕೀನ್ ಕೇಂದ್ರದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಪ್ರಸಾರ ಭಾರತಿ ಆಕಾಶವಾಣಿ ಚಿತ್ರದುರ್ಗ ಬೆಂಬಲಿಸಿ ಅಭಿಯಾನದ ಅಂಗವಾಗಿ ವಿಶ್ವ ವೈದ್ಯರ ದಿನಾಚರಣೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ವೃತ್ತಿಯು ಜೀವನದ ಗುಣಮಟ್ಟ ಸುಧಾರಿಸಲು ಮತ್ತು ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಸಹಾಯ ಮಾಡುತ್ತದೆ. ಪ್ರಾಣ ಉಳಿಸುವ ವ್ಯದ್ಯರ ಸೇವೆ ಅತ್ಯಂತ ಅಮೂಲ್ಯವಾದದ್ದು ಎಂದರು. ಲಂಡನ್ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಿ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ, ಗ್ರಾಮೀಣ ಪ್ರದೇಶಗಳಿಗೂ ಹೋಗಿ ಸೇವೆ ಸಲ್ಲಿಸುತ್ತಿರುವ ಡಾ.ಸಂತೋಷ ಉಜ್ಜನಪ್ಪ ಅವರ ಸೇವೆ ಅತ್ಯಂತ ಶ್ಲಾಘನೀಯ ಎಂದು ಪ್ರಶಂಶಿಸಿದರು.
ಎಮರ್ಜೆನ್ಸಿ ಫಿಸಿಷಿಯನ್ ಮತ್ತು ಡಯಾಬಿಟಾಲಾಜಿಸ್ಟ್ ಡಾ.ಸಂತೋಷ್ ಉಜ್ಜನಪ್ಪ, ಚರ್ಮ ಮತ್ತು ಲೈಂಗಿಕ ರೋಗ ತಜ್ಞರಾದ ಡಾ.ಅಪೂರ್ವ, ಹಿರಿಯ ದಂತ ವೈದ್ಯ ಡಾ.ಶೋಭಾ, ಕಣ್ಣಿನ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ರಕ್ತದೊತ್ತಡ, ಮದುಮೇಹ, ಚರ್ಮ, ದಂತ ರೋಗ, ನೇತ್ರ ಸೇರಿ ಇನ್ನಿತರ ಕಾಯಿಲೆಗಳ ಸಂಬಂಧ 150 ಜನರಿಗೆ ತಪಾಸಣೆ ನಡೆಸಿ ಔಷಧಗಳು ಮತ್ತು ಕನ್ನಡಕಗಳನ್ನು ಉಚಿತವಾಗಿ ವಿತರಿಸಿದರು. ರೆಡ್ಕ್ರಾಸ್ ವತಿಯಿಂದ ಶಾಲಾ ಮಕ್ಕಳಿಗೆ ಮಾಸ್ಕ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೆಡ್ಕ್ರಾಸ್ ರಾಜ್ಯ ಆಡಳಿತ ಮಂಡಳಿ ಸದಸ್ಯ ಅನಂತ ರೆಡ್ಡಿ, ಸಭಾಪತಿ ಗಾಯತ್ರಿ ಶಿವರಾಮ್, ಕಾರ್ಯದರ್ಶಿ ಮಜಹರ್ ಉಲ್ಲಾ, ನಿರ್ದೇಶಕರಾದ ಡಾ. ಮಧುಸೂದನ್ ರೆಡ್ಡಿ, ಗುರುಮೂರ್ತಿ, ಸುರೇಶ್ ಬಾಬು, ಶಿವರಾಮ್, ದಿನಕರ್, ಮುಖ್ಯ ಶಿಕ್ಷಕಿ ಮೀನಾಕ್ಷಿ, ರೆಡ್ ಕ್ರಾಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.

















