ದೇವನಹಳ್ಳಿ: ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಸ್ಕ್ರಾಲ್ ಮಾಡುವಾಗ ನಿನ್ನೆ ಒಂದಷ್ಟು ಮಂದಿಯ ಗಮನಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಫೋಟೋ ಕಣ್ಣಿಗೆ ಬಿದ್ದಿರುತ್ತೆ. ಆ ಫೋಟೋದಲ್ಲಿ ಕುಮಾರಸ್ವಾಮಿ ಅವರು ತೀರಾ ಸಣ್ಣಗೆ ಆಗಿದ್ದರು. ನೋಡುಗರಿಗೇನೆ ಬೇಸರವೆನಿಸಿತ್ತು. ಆ ಫೋಟೋ ಜೊತೆಗೆ, ಅಧಿಕಾರಕ್ಕಿಂತ ಆರೋಗ್ಯ ಮುಖ್ಯ ಎಂಬಂತೆ ಬರೆಯಲಾಗಿತ್ತು. ಇದನ್ನ ಕಂಡ ಕುಮಾರಣ್ಣನ ಅಭಿಮಾನಿಗಳು ನೊಂದುಕೊಂಡಿದ್ದಾರೆ. ಇದೀಗ ಅವರ ಪುತ್ರ ನಿಖಿಲ್ ಕುಮಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕುಮಾರಣ್ಣನ ಆರೋಗ್ಯ ಸರಿ ಇಲ್ಲ ಅಂತ ರಾಜ್ಯದೆಲ್ಲೆಡೆ ಚರ್ಚೆಗಳು ಶುರುವಾಗಿದೆ. ಅವರ ತಂದೆ, ತಾಯಿ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಯಾರೂ ಕೂಎ ಆತಂಕ ಪಡುವ ಅಗತ್ಯವಿಲ್ಲ. ಇತ್ತೀಚೆಗೆ ಮಾಧ್ಯಮಗಳು ಮತ್ತು ಕಾರ್ಯಕರ್ತರು ಕುಮಾರಣ್ಣನ ಆರೋಗ್ಯದಲ್ಲಿ ಏರುಪೇರಾಗಿದೆ ಅಂತ ಕೇಳುತ್ತಾ ಇದ್ದರು. ಹೀಗಾಗಿ ನಾನು 80 ಕ್ಷೇತ್ರಗಳಲ್ಲಿ ಸುತ್ತಾಡಿ ಅವರ ಜವಾಬ್ದಾರಿಯನ್ನು ಹೊರುತ್ತಿದ್ದೇನೆ.
ಪ್ರತಿದಿನವೂ ದೇವರಲ್ಲಿ ನನ್ನ ಆಯಸ್ಸನ್ನು ನನ್ನ ತಂದೆಗೆ ಕೊಡು ದೇವರೆ ಎಂದು ಕೇಳಿಕೊಳ್ಳುತ್ತಿದ್ದೇನೆ. ನಾನು ಕೇವಲ ಮಗನಾಗಿ ಈ ಮಾತನ್ನ ಹೇಳ್ತಿಲ್ಲ. ಕುಮಾರಣ್ಣನ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮತ್ತೆ ಅವರು ಚೇತರಿಕೆ ಕಾಣುತ್ತಿದ್ದಾರೆ. ಶೀಘ್ರದಲ್ಲಿಯೇ ಸಂಪೂರ್ಣ ಗುಣಮುಖರಾಗುತ್ತಾರೆ. ದೇವೇಗೌಡರು, ಕುಮಾರಣ್ಣ ಇಬ್ಬರು ಸಹ ಶತಾಯುಷಿಗಳಾಗುತ್ತಾರೆ ಎಂಬ ನಂಬಿಕೆ ಇದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.


