ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 26 : ಓಂ ಶಾಂತಿ ಎನ್ನುವ ಪದಕ್ಕೆ ಮಹತ್ವವಿದೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಬಂದು ಧ್ಯಾನದಲ್ಲಿ ತೊಡಗಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆಂದು ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಹೇಳಿದರು.
ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹನ್ನೆರಡನೆ ಶತಮಾನದ ಬಸವಣ್ಣ, ಪ್ರವಾದಿ ಮಹಮದ್ ಪೈಗಂಬರ್, ಭಗವದ್ಗೀತೆ, ಮಹಾಭಾರತ, ರಾಮಾಯಣ ಇವೆಲ್ಲವು ಮಾನವ ಧರ್ಮ ಒಂದೆ ಎನ್ನುವ ಸಾರವನ್ನು ವಿಶ್ವಕ್ಕೆ ನೀಡಿವೆ. ಹುಟ್ಟು-ಸಾವಿನ ನಡುವೆ ಅನೇಕ ಜಂಜಾಟಗಳು, ದುರಾಸೆ, ಸಂಪತ್ತು ಗಳಿಸಬೇಕೆಂಬ ಹಪಹಪಿಯಿಂದ ಮಾನವ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ. ಹುಟ್ಟುವಾಗ ಬರಿಗೈ, ಸತ್ತಮೇಲೂ ಬರಿಗೈಯಲ್ಲೇ ಹೋಗಬೇಕು ಎನ್ನುವ ಸತ್ಯವನ್ನು ತಿಳಿದುಕೊಂಡಾಗ ಜೀವನ ಸುಖಮಯವಾಗಿರುತ್ತದೆ ಎಂದರು.ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಧ್ಯಾನ ಮಾಡಿದರೆ ಮನಸ್ಸು ಪ್ರಶಾಂತವಾಗಿರುತ್ತದೆ. ಮಹಿಳೆ ತ್ಯಾಗದ ಸಂಕೇತ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಾದರೂ ಮಹಿಳೆಯರು ಒಂದೆಡೆ ಸೇರಿದಾಗ ಸಮಾಜದ ಮುಖ್ಯವಾಹಿಗೆ ಬರಲು ಸಾಧ್ಯ. ಹೆಣ್ಣು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಎಲ್ಲಾ ರಂಗದಲ್ಲಿಯೂ ವಿಪುಲ ಅವಕಾಶವಿದೆ. ಸದ್ಬಳಕೆ ಮಾಡಿಕೊಳ್ಳಬೇಕಷ್ಟೆ ಎಂದು ಕರೆ ನೀಡಿದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ ಮಾತನಾಡಿ ಮಹಿಳೆಯರು ಮನೆಯಲ್ಲಿ ಹಸನ್ಮುಖಿಯಾಗಿ ಶಾಂತವಾಗಿದ್ದರೆ ಇಡಿ ಕುಟುಂಬವೆ ನೆಮ್ಮದಿಯಾಗಿರುತ್ತದೆ. ಪ್ರತಿನಿತ್ಯವು ಬೆಳಿಗ್ಗೆ ಎದ್ದ ಕೂಡಲೆ ಧ್ಯಾನ ಮಾಡಿದರೆ ಅಂತರಂಗದ ಶಕ್ತಿ ವೃದ್ದಿಸುತ್ತದೆ. ಒಂದೊಂದು ತುತ್ತು ಊಟ ಮಾಡುವಾಗ ಭಗವಂತನನ್ನು ಸ್ಮರಣೆ ಮಾಡಿಕೊಳ್ಳಬೇಕು. ಮೊಬೈಲ್ ಟಿವಿ.ಯಿಂದ ದೂರವಿದ್ದು, ನಿಮ್ಮ ಜೀವನವನ್ನು ನೀವೆ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರ ಬದುಕಿನಲ್ಲಿಯೂ ಅನೇಕ ಸಮಸ್ಯೆಗಳು ಎದುರಾಗುವುದು ಸಹಜ. ನೀವು ಒಳ್ಳೆ ಸಂಕಲ್ಪ ಮಾಡಿದರೆ ಮನಸ್ಸಿನಲ್ಲಿರುವ ಕಲ್ಮಶ ದೂರವಾಗುತ್ತದೆಂದರು. ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಶಬೀನಾಜಾನ್ ವೇದಿಕೆಯಲ್ಲಿದ್ದರು.


















