ಸುದ್ದಿಒನ್, ಹಿರಿಯೂರು, ಮೇ. 10 : ಸರ್ಕಾರದಿಂದ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಕಾಡುಗೊಲ್ಲ ಸಮುದಾಯದವರು ಜಾತಿ ಕಾಲಂ ನಲ್ಲಿ ಕಾಡುಗೊಲ್ಲ ಎಂದು ನಮೂದಿಸಬೇಕೆಂದು ನಗರಸಭೆ ಸದಸ್ಯ ಚಿತ್ರಜಿತ್ ಯಾದವ್ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ರಾಜ್ಯ ಸರ್ಕಾರ ಕಾಡುಗೊಲ್ಲರನ್ನು ಪ್ರತ್ಯೇಕ ಜಾತಿ ಎಂದು ಗುರುತಿಸಿ, ಕಾಡುಗೊಲ್ಲ ಜಾತಿಪಟ್ಟಿ ನೀಡಲಾಗುತ್ತಿದೆ. ಅಲ್ಲದೆ ಸಮುದಾಯದ ಅಭಿವೃದ್ಧಿಗಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಜೊತೆಗೆ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಕಡತವನ್ನು ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ, ವಸತಿ, ನೇರ ಸಾಲ, ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಯೋಜನೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ಹಾಗೂ ಅಲೆಮಾರಿ ಹಾಗೂ ಅರೆ ಅಲೆಮಾರಿ ಯೋಜನೆಗೆ ಸಹಾಯವಾಗಲಿದೆ. ಆಗಾಗಿ ಸಮುದಾಯದವರು ಜಾತಿ ಕಾಲಂ ನಲ್ಲಿ ‘ಕಾಡುಗೊಲ್ಲ’ ಎಂದು ಬರೆಸಬೇಕು. ತಮ್ಮ ತಮ್ಮ ಮನೆಗಳಲ್ಲಿ ಜಾತಿ ಗಣತಿ ಸರ್ವೇಗೆ ಬಂದಾಗ ಗೊಲ್ಲರಹಟ್ಟಿಗಳಲ್ಲಿನ ಮುಖಂಡರು, ವಿದ್ಯಾವಂತರು ಹಾಗೂ ವಿದ್ಯಾರ್ಥಿಗಳು ಮುಂದೆ ನಿಂತು ಈ ಕೆಲಸ ಮಾಡಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ









