ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 08 : ಮೇಲ್ವರ್ಗದ ಜನಾಂಗದಿಂದ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಐಮಂಗಲದ ಬಸವಹರಳಯ್ಯ ಸ್ವಾಮೀಜಿರವರಿಗೆ ರಕ್ಷಣೆ ನೀಡಿ ಹಲ್ಲೆಕೋರರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಹಿರಿಯೂರಿನ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹರಳಯ್ಯ ಸ್ವಾಮೀಜಿರವರಿಗೆ ಆತ್ಮಸ್ಥೈರ್ಯ ತುಂಬಿದ ಷಡಕ್ಷರಮುನಿ ಸ್ವಾಮೀಜಿ ಮಠದ ಜಾಗದ ವಿಚಾರವಾಗಿ ಹಿರಿಯೂರು ತಾಲ್ಲೂಕು ಆದಿರಾಳು ಗ್ರಾಮದ ಲಿಂಗಾಯಿತ ಕೋಮಿಗೆ ಸೇರಿದ ಸಿದ್ದೇಶ್ವರ, ಆಕಾಶ್, ಶಿವಪ್ರಕಾಶ್ ಮತ್ತು ಬೆಂಬಲಿಗರು ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ. ಇದೊಂದು ಹಲ್ಲೆಯಲ್ಲ. ಹತ್ಯೆಯ ಸಂಚು. ಐಮಂಗಲ ಠಾಣೆಗೆ ದೂರು ನೀಡಲು ಸ್ವಾಮೀಜಿ ಹೋಗಿದ್ದಾಗ ಅಲ್ಲಿಯೂ ಪೊಲೀಸರ ಎದುರಿನಲ್ಲೇ ಹಲ್ಲೆ ನಡೆಸಿರುವುದನ್ನು ನೋಡಿದರೆ ಇವರ ದೌರ್ಜನ್ಯ ಮಿತಿ ಮೀರಿದೆ ಎನ್ನುವುದು ಗೊತ್ತಾಗುತ್ತದೆ. ಹಲ್ಲೆಕೋರರನ್ನು ರೌಡಿ ಪಟ್ಟಿಗೆ ಸೇರಿಸಿ ಗಡಿಪಾರು ಮಾಡಬೇಕು. ಈಗಾಗಲೆ ನ್ಯಾಯಾಂಗ ಬಂಧನದಲ್ಲಿರುವವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದೆಂದು ಷಡಕ್ಷರ ಮುನಿ ಸ್ವಾಮೀಜಿ ಆಗ್ರಹಿಸಿದರು.
ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿಬಾಬು ಸ್ವಾಮೀಜಿಗಳಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ.ಗಳ ನೆರವು ನೀಡಿದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಭಾರತೀಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರಕಾಶ್ ಬೀರಾವರ, ಎಂ.ಡಿ.ರವಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ವಿಶ್ವನಾರಾಯಣಮೂರ್ತಿ, ಬೋರನಕುಂಟೆ ಜೀವೇಶ್, ಪಟ್ರೆಹಳ್ಳಿ ಮಹೇಶ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.











