ಬೆಂಗಳೂರು: ಇಂದು ಕಾಂಗ್ರೆಸ್ ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ವೇದಿಕೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟದ ವೇದಿಕೆಗೆ ಬಂದ ರಾಹುಲ್ ಗಾಂಧಿ ಅವರು ಮಹದೇವಪುರ ಕ್ಷೇತ್ರದಲ್ಲಿ 5 ವಿಧಗಳಲ್ಲಿ ಮತಗಳ್ಳತನವಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಮತಗಟ್ಟೆಯ ದೃಶ್ಯಾವಳಿಗಳನ್ನ ನೀಡಲಿ ಆ ಬಳಿಕ ಹೇಗೆ ಮತಗಳ್ಳತನವಾಗಿದೆ ಎಂಬುದನ್ನ ಸಾಬೀತು ಪಡಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ವಿಳಾಸವಿಲ್ಲದ 40 ಸಾವಿರಕ್ಕೂ ಹೆಚ್ಚು ಮತದಾರರನ್ನು ಪತ್ತೆ ಹಚ್ಚಿದ್ದೇವೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿಯೇ ಮತಗಳ್ಳತನವಾಗಿದೆ. ಚುನಾವಣಾ ಆಯೋಗ ನನಗೆ ಪ್ರಮಾಣ ಪತ್ರ ನೀಡುವಂತೆ ಹೇಳುತ್ತಿದೆ. ಸಂವಿಧಾನದ ಮೇಲೆ ಲೋಕಸಭೆಯೊಳಗೆ ಪ್ರಮಾಣ ಮಾಡಿದ್ದೇನೆ. ಈ ಡೇಟಾ ಇಟ್ಕೊಂಡು ದೇಶದ ಪ್ರಜೆಗಳು ಪ್ರಶ್ನಿಸುತ್ತಾರೆಂದು ಆಯೋಗದ ವೆಬ್ಸೈಟ್ ಬಂದ್ ಮಾಡಿದೆ.
ದೇಶದ ಚುನಾವಣಾ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ನೀಡಬೇಕು. ಮತಗಟ್ಟೆಗಳ ದೃಶ್ಯಾವಳಿ ನೀಡಿದರೆ ಮತಗಳ್ಳತನ ಸಾಬೀತು ಮಾಡುವೆ. ಲೋಕಸಭೆಯಲ್ಲಿ ಸಿಕ್ಕಷ್ಟೇ ಮತ ವಿಧಾನಸಭೆಯಲ್ಲೂ ಸಿಕ್ಕಿತ್ತು. ಎಂಪಿ ಚುನಾವಣೆಯಲ್ಲಿ ಹೊಸದಾಗಿ ಒಂದು ಕೋಟಿ ಜನ ಮತ ಹಾಕಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹೊಸದಾಗಿ ಒಂದು ಕೋಟಿ ಜನ ಮತ ಹಾಕಿದ್ದಾರೆ. ಆ ಮತಗಳೆಲ್ಲಾ ಬಿಜೆಪಿಗೆ ಹೋಗಿದೆ. ಕರ್ನಾಟಕದಲ್ಲಿ ಆಂತರಿಕ ಸಮೀಕ್ಷೆಯ ಪ್ರಕಾರ ನಮಗೆ 15 ರಿಂದ 16 ಸ್ಥಾನ ಬರುವ ವಿಶ್ವಾಸ ಇತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ನಮಗೆ ಕೇವಲ 9 ಸ್ಥಾನ ಬಂದಿದೆ. ಬೆಂಗಳೂರು ಸೆಂಟಲ್ ಕ್ಷೇತ್ರದಲ್ಲಿ ಮಾಹಿತಿ ಕಲೆ ಹಾಕಿದ್ದೇವು. ಐದು ವಿಧಗಳಲ್ಲಿ ಮತಗಳ್ಳತನವಾಗಿದೆ ಎಂದಿದ್ದಾರೆ.










