ಸುದ್ದಿಒನ್, ಚಿತ್ರದುರ್ಗ, ಮೇ. 31 : ಭೋವಿ ಸಮುದಾಯದ ಕೋಟಾದಡಿಯಲ್ಲಿ ಪುಲಕೇಶಿನಗರದ ಜನಪ್ರಿಯ ಶಾಸಕರಾದ ಎ.ಸಿ.ಶ್ರೀನಿವಾಸ್ ರವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ವರಿಷ್ಠರಲ್ಲಿ ಸಮಾಜ ಸೇವಕರು, ಜನಪರ ಹೋರಾಟಗಾರರು ಹಾಗೂ ರಾಜ್ಯ ಭೋವಿ ಸಮಾಜದ ಹಿರಿಯ ಮುಖಂಡರು ಆದ ಆರ್.ಶೇಷಣ್ಣಕುಮಾರ್ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರಾಜಕಾರಣದ 224 ಎಂ.ಎಲ್.ಎ. ಕ್ಷೇತ್ರಗಳ ಪೈಕಿ ಕನಿಷ್ಠ ಸುಮಾರು 150-160 ಕ್ಷೇತ್ರಗಳ ಪಲಿತಾಂಶಗಳಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮುದಾಯಕ್ಕೆ ಆಳುವ ಪಕ್ಷಗಳಿಂದ ಸಮರ್ಪಕವಾದ ರಾಜಕೀಯ ಪ್ರಾತಿನಿಧ್ಯ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಸಿಗುತ್ತಿಲ್ಲವೆಂಬ ಹತಾಶೆಯ ಕೂಗು ರಾಜ್ಯದೆಲ್ಲೆಡೆ ಈಗಾಗಲೇ ಸದ್ದು ಮಾಡುತ್ತಲೇ ಇದೆ.
ಶ್ರಮ ಸಂಸ್ಕೃತಿಯ ರುವಾರಿಗಳೂ ಹಾಗೂ ಅತ್ಯಂತ ಕಠಿಣ ಪರಿಶ್ರಮದ ಮೂಲಕ ನಿಷ್ಠಾವಂತರೆನಿಸಿಕೊಂಡಿರುವ ಭೋವಿ ಸಮುದಾಯಕ್ಕೆ ಸಿದ್ದರಾಮಯ್ಯ ನವರ ಸರ್ಕಾರದ ಅವಧಿಯಲ್ಲಿ ನಮ್ಮ ಸಮುದಾಯದ ಹಲವು ವಿಷಯಗಳ ಕುರಿತಂತೆ ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಒಳಮೀಸಲಾತಿ, ಜನಗಣತಿ, ಭೋವಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಹಗರಣ, ಕುಲಗುರು ಸಿದ್ದರಾಮೇಶ್ವರರ ಜಯಂತಿ,ಶ್ರೀಸಿದ್ದರಾಮೇಶ್ವರ ಪ್ರಶಸ್ತಿ ಹಾಗೂ ಇನ್ನು ಹತ್ತು ಹಲವಾರು ವಿಚಾರಗಳಲ್ಲಿ ಪಕ್ಷ ಹಾಗೂ ಸಮಾಜದ ಹಿತದೃಷ್ಟಿಯಿಂದ ಸಮರ್ಪಕ ನ್ಯಾಯ ಸಿಗದೇ ಭೋವಿ ಸಮುದಾಯದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ.
ಕಾಂಗ್ರೆಸ್ಸಿನ ಶ್ರೇಯಸ್ಸಿಗಾಗಿ ಯಾವ ಪ್ರಚಾರವನ್ನು ಬಯಸದೇ ಪರೋಕ್ಷವಾಗಿ/ಪ್ರತ್ಯೇಕವಾಗಿ ದುಡಿಯುತ್ತಾ ಬರುತ್ತಿರುವ ರಾಜ್ಯದಾದ್ಯಂತ ವಾಸಿಸುತ್ತಿರುವ ಸುಮಾರು 30-35 ಲಕ್ಷ ಸಂಖ್ಯೆಯ ಜನತೆಯ ಪರವಾಗಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿದಂತೆಯೇ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಸಾಹೇಬ್ರ ನೇತೃತ್ವದ ಸರ್ಕಾರದಲ್ಲಿಯೂ ಕ್ಯಾಬಿನೆಟ್ ನಲ್ಲಿ ತಮ್ಮ ವಿಶಿಷ್ಟ ಕಾರ್ಯ ವೈಖರಿಯ ಮೂಲಕ ರಾಜಧಾನಿ ಬೆಂಗಳೂರಿನ ಪುಲಕೇಶಿನಗರದ ಕ್ಷೇತ್ರದ ಜನಪರ ಸೇವಾಕಾರ್ಯಗಳಲ್ಲಿ ವಿಶೇಷ ಛಾಪು ಮೂಡಿಸಿರುವ ಜೊತೆಗೆ ಭೋವಿ ಸಮುದಾಯದ ಜನರೊಂದಿಗೆ ನಿಕಟ ಸಂಭಂದವನ್ನೊಂದಿ ಸಮಾಜದ ಹಿತ ಕಾಪಾಡುತ್ತಿರುವ ಉದಯೋನ್ಮುಖ ರಾಜಕಾರಿಣಿ ಹಾಗೂ ಭೋವಿ ಜನರ ಕಣ್ಮಣಿ ಎಂದೇ ಖ್ಯಾತಿ ಗಳಿಸಿರುವ ಅಪ್ಪಟ ಕಾಂಗ್ರೆಸ್ಸಿಗರೂ ಹಾಗೂ ಯಾವೊಂದೂ ಕಪ್ಪು ಚುಕ್ಕೆ ಇಲ್ಲದ ನಿಷ್ಟಾವಂತ ಶಾಸಕರೆನಿಸಿಕೊಂಡಿರುವ ಎ.ಸಿ.ಶ್ರೀನಿವಾಸ್ ರವರಿಗೆ ಭೋವಿ ಸಮುದಾಯದ ಕೋಟಾದಡಿಯಲ್ಲಿ ಪ್ರಮುಖ ಖಾತೆಯನ್ನು ನೀಡುವ ಮೂಲಕ ಕಾಂಗ್ರೇಸ್ ಪಕ್ಷದ ಒಳಿತಿಗಾಗಿ,ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಭೋವಿ ಸಮುದಾಯದ ಹಿತರಕ್ಷಣೆಯನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ವರಿಷ್ಠರು ಅನುವು ಮಾಡಿಕೊಡಬೇಕೆಂದು ಆರ್.ಶೇಷಣ್ಣಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊಬ೬. ಸಂಖ್ಯೆ : 77603-79111, 94481-70553










