ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 09 : ಹಜ್ ಯಾತ್ರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಲಸಿಕೆ ನೀಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುನೀಲ್ಕುಮಾರ್ ತಿಳಿಸಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಬಿ.ಸಿ.ರಾಯ್ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಹಜ್ ಯಾತ್ರಾರ್ಥಿಗಳಿಗೆ ಜಿಲ್ಲಾ ಹಜ್ ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಅನೇಕ ಸಾವು-ನೋವುಗಳು ಸಂಭವಿಸಿತು. ಹಾಗಾಗಿ ಲಸಿಕೆ ಅಮೃತವಿದ್ದಂತೆ. ಆರೋಗ್ಯ ಇಲಾಖೆಯಿಂದ ನಿಮ್ಮ ಅಹವಾಲುಗಳಿಗೆ ಸ್ಪಂದಿಸಿ ಸಂಪೂರ್ಣ ಸಹಕಾರ ನೀಡುತ್ತೇವೆ. ಹಜ್ಗೆ ಹೋಗುವ ನೀವುಗಳು ಲೋಕ ಕಲ್ಯಾಣಾರ್ಥ ಅಲ್ಲಾನಲ್ಲಿ ಪ್ರಾರ್ಥಿಸಿಕೊಂಡು ಸುಖಕರವಾಗಿ ಹಿಂದಿರುಗಿ ಎಂದು ಹಾರೈಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ ಮಾತನಾಡಿ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಕಷ್ಟ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ತಪಾಸಣೆ, ಇ.ಸಿ.ಜಿ. ಹಾಗೂ ಲಂಗ್ಸ್ ತಪಾಸಣೆ ನಡೆಸಿ ಲಸಿಕೆ ನೀಡಿ ಫಿಟ್ನೆಸ್ ಸರ್ಟಿಫಿಕೇಟ್ ಕೊಡುತ್ತವೆ. ಆಗ ನೀವು ಹಜ್ಯಾತ್ರೆಗೆ ಹೋಗಲು ಸುಲಭವಾಗುತ್ತದೆ. ಲಕ್ಷಾಂತರ ಜನ ಸೇರುವ ಹಜ್ನಲ್ಲಿ ಯಾರಿಗೆ ಯಾವಾಗ ಆರೋಗ್ಯ ಸಮಸ್ಯೆ ಎದುರಾಗುತ್ತದೆನ್ನುವುದನ್ನು ಹೇಳುವಂತಿಲ್ಲ. ಅದಕ್ಕಾಗಿ ಹಜ್ ಕಮಿಟಿ ನೀಡುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಹೇಳಿದರು.
ಆರ್.ಸಿ.ಹೆಚ್.ಅಧಿಕಾರಿ ಡಾ.ಅಭಿನವ್ ಮಾತನಾಡುತ್ತ ಪ್ರತಿಯೊಂದು ಧರ್ಮದಲ್ಲಿಯೂ ದೇವರ ಮೇಲೆ ನಂಬಿಕೆ ಭಕ್ತಿ ಇದ್ದೆ ಇರುತ್ತದೆ. ಅದೆ ರೀತಿ ಇಸ್ಲಾಂ ಧರ್ಮದಲ್ಲಿ ಪ್ರತಿ ವರ್ಷವೂ ಹಜ್ಯಾತ್ರೆಗೆ ಹೋಗುವುದು ಒಂದು ವಾಡಿಕೆ. ಬೆಂಗಳೂರಿನ ಹಜ್ ಕಮಿಟಿಯಿಂದ ನಮಗೆ ಕೆಲವೊಂದು ಸೂಚನೆಗಳು ಬರುತ್ತವೆ. ಅದರ ಪ್ರಕಾರ ನಿಮ್ಮ ಆರೋಗ್ಯ ತಪಾಸಣೆ ನಡೆಸಿ ಪೊಲೀಯೋ, ನಿಮೊನಿಯಾಗೆ ಒಟ್ಟು ಮೂರು ಲಸಿಕೆಗಳನ್ನು ನೀಡುತ್ತೇವೆ. ಯಾತ್ರೆಗೆ ಹೋಗುವ ಮುನ್ನಾ ಈಗಿನಿಂದಲೆ ಪ್ರತಿನಿತ್ಯವೂ ವಾಕ್ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಯಾತ್ರಾರ್ಥಿಗಳಿಗೆ ಸಲಹೆ ನೀಡಿದರು.
ಹಜ್ ಸೇವಾ ಸಮಿತಿ ಅಧ್ಯಕ್ಷ ಹಾಜಿ ಆರ್.ದಾದಾಪೀರ್ ಮಾತನಾಡಿ ಪ್ರತಿ ವರ್ಷವೂ ಹಜ್ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಲಾಗುವುದು. ಅದರಂತೆ ಈ ಬಾರಿ ಇಪ್ಪತ್ತನೆ ವರ್ಷದ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಜಿಲ್ಲೆಯಿಂದ 155 ಜನ ಆಯ್ಕೆಯಾಗಿದ್ದು, ಎಲ್ಲರಿಗೂ ತಪಾಸಣೆ ನಡೆಸಿದ ನಂತರ ಆರೋಗ್ಯ ಇಲಾಖೆಯವರು ನೀಡುವ ವೈದ್ಯಕೀಯ ದೃಢೀಕರಣ ಪಡೆದು ಹಜ್ ಯಾತ್ರೆಗೆ ಹೋಗಬಹುದು. ಹಜ್ನಲ್ಲಿ ವಿಧಿ ವಿಧಾನಗಳ ಪ್ರಕಾರ ಹೇಗೆ ಪ್ರಾರ್ಥನೆ ಸಲ್ಲಿಸಬೇಕೆಂಬುದನ್ನು ಧರ್ಮ ಗುರುಗಳು ತರಬೇತಿ ನೀಡುತ್ತಾರೆ. ಅದರಂತೆ ನೀವುಗಳು ಅಲ್ಲಿ ವರ್ತಿಸಬೇಕೆಂದು ಮನವಿ ಮಾಡಿದರು.
ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ಡೀನ್ ಹಾಗೂ ನಿರ್ದೇಶಕರಾದ ಯುವರಾಜ್, ಡಾ.ದಿವ್ಯ, ನರ್ಸಿಂಗ್ ಅಧೀಕ್ಷಕಿ ಮೇಘನಾ ಹಾಗೂ ವೈದ್ಯರುಗಳು ವೇದಿಕೆಯಲ್ಲಿದ್ದರು.











