ಇದೆಲ್ಲಾ ಮಾಡಿಸಿದ್ದು ಡಿಕೆಶಿ.. ನಾನು ಹೊರಗೆ ಬಂದ ದಿನ ಸರ್ಕಾರ ಪತನವಾಗುತ್ತೆ : ವಕೀಲ ದೇವರಾಜೇಗೌಡ ಶಾಕಿಂಗ್ ಹೇಳಿಕೆ..!

suddionenews
1 Min Read

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ನಾಯಕ, ವಕೀಲ ದೇವರಾಜೇಗೌಡರನ್ನು ಪೊಲೀಸರು ಅರೆಸ್ಟ್ ಮಾಡಿ, ತನಿಖೆ ಚುರುಕುಗೊಳಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ಇಂದು ಕೋರ್ಟ್ ಮುಂದೆ ದೇವರಾಜೇಗೌಡರನ್ನು ಹಾಜರುಪಡಿಸಿದ್ದರು. ಹೆಚ್ಚಿನ ತನಿಖೆಗಾಗಿ ಎಸ್ಐಟಿಗೆ ನೀಡುತ್ತಿದ್ದಂತೆ ಕೆಂಡಾಮಂಡಲರಾಗಿದ್ದಾರೆ. ರಾಜ್ಯ ಸರ್ಕಾರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

‘ಡಿಕೆ ಶಿವಕುಮಾರ್ ನನಗೆ 100 ಕೋಟಿಯ ಆಫರ್ ನೀಡಿದ್ದರು. ಈ ಬಗ್ಗೆ ಬೋರಿಂಗ್ ಕ್ಲಬ್ ನಲ್ಲಿ ಮಾತುಕತೆ ಆಗಿತ್ತು. ಲೈಂಗಿಕ ಕೇಸ್ ಹಾಕಿಸಿದರು. ಆದರೆ ಅದರಲ್ಲಿ ಸಾಕ್ಷಿಗಳು ಸಿಗಲಿಲ್ಲ. ಆಮೇಲೆ ರೇಪ್ ಕೇಸ್ ಹಾಕಿಸಿದರೂ. ಆಮೇಲೂ ಸಾಕ್ಷಿಗಳು ಸಿಗಲಿಲ್ಲ. ಏನಾದರೂ ಮಾಡಿ ನನ್ನನ್ನು ಮಟ್ಟ ಹಾಕಿಸಬೇಕೆಂದು ಈಗ ಪೆನ್ ಡ್ರೈವ್ ಕೇಸಿನಲ್ಲಿ ಸಿಕ್ಕಿ ಹಾಕಿಸಿದ್ದಾರೆ. ಇದನ್ನೆಲ್ಲಾ ಮಾಡಿಸಿದ್ದು ಡಿಕೆ ಶಿವಕುಮಾರ್. ಅವರ ಕೈವಾಡದಲ್ಲಿಯೇ ಇದೆಲ್ಲಾ ಆಗಿರುವುದು. ಮುಂದೆ ಕಾನೂನು ಹೋರಾಟ ಮಾಡಿ ಡಿಕೆ ಶಿವಕುಮಾರ್ ಅವರನ್ನು ಮಟ್ಟ ಹಾಕಿಸುತ್ತೇ‌ನೆ ಎಂದಿದ್ದಾರೆ.

ಅವರಿಗೆ ಸಿಕ್ಕಿರುವ ಪೆನ್ ಡ್ರೈವ್ ನಲ್ಲಿ ಕಾರ್ತಿಕ್ ಪತ್ನಿಯನ್ನು ಕಿಡ್ನ್ಯಾಪ್ ಮಾಡಿರುವ ವಿಡಿಯೋ ಇದೆ. ಡಿ.ಕೆ.ಶಿವಕುಮಾರ್ ನನ್ನೊಂದಿಗೆ ಮಾತನಾಡಿರುವ ಆಡಿಯೋ ಇದೆ. ಅದು ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ನಾನು ಹೊರಗೆ ಬಂದ ದಿನವೇ ಸರ್ಕಾರ ಪತನವಾಗಲಿದೆ. ನನ್ನ ಮನೆಯಲ್ಲಿ ಎಸ್ಐಟಿಗೆ ಏನು ಸಿಕ್ಕಿಲ್ಲ. ನನ್ನ ಬಳಿ ಇರುವ ಸಾಕ್ಷಿ ಇನ್ನೆಲ್ಲೋ ಇದೆ. ಸಾಕ್ಷಿಯನ್ನು ಜೋಪಾನವಾಗಿ ಇಟ್ಟಿದ್ದೇನೆ‌. ಬೋರಿಂಗ್ ಕ್ಲಬ್ ರೂಮ್ 110ಕ್ಕೆ ಚನ್ನರಾಯಪಟ್ಟಣದ ಗೋಪಾಲಸ್ವಾಮಿಗೆ ಐದು ಕೋಟಿ ಕೊಟ್ಟು ಸಂಧಾನಕ್ಕೆ ಕಳುಹಿಸಿದ್ದರು ಎಂದು ಆರೋಪಗಳ ಸುರಿಮಳೆಯನ್ನೇ‌ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *