ತುಮಕೂರು: ದಾವಣಗೆರೆಯ ಪಿಎಸ್ಐ ನಾಗರಾಜಪ್ಪ ತುಮಕೂರಿನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ದ್ವಾರಕ ಹೊಟೇಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಾಗರಾಜಪ್ಪ ದೇಹ ಪತ್ತೆಯಾಗಿದೆ. 45 ವರ್ಷದ ಪಿಎಸ್ಐ ನಾಗರಾಜಪ್ಪ ಅನುಮಾನಾಸ್ಪದವಾಗಿ ಪ್ರಾಣ ಬಿಟ್ಟಿದ್ದಾರೆ. ದ್ವಾರಕ ಹೊಟೇಲ್ ಗೆ ಬಂದು ಆತ್ಮಹತ್ಯೆ ಮಾಡಿಕೊಂಡರಾ..? ಆತ್ಮಹತ್ಯೆಗೆ ಕಾರಣವಾದರೂ ಏನು ಎಂಬೆಲ್ಲಾ ಬಗ್ಗೆ ಹಲವು ಅನುಮಾನಗಳು ಸೃಷ್ಟಿಯಾಗಿವೆ.
ಹೊಟೇಲ್ ನ 4ನೇ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಜುಲೈ 1ರಂದು ನಾಗರಾಜಪ್ಪ ಅವರು ತುಮಕೂರಿಗೆ ಬಂದಿದ್ದರು. ದ್ವಾರಕ ಹೊಟೇಲ್ ನಲ್ಲಿ ರೂಮೊಂದನ್ನ ಬಾಡಿಗೆ ಪಡೆದು ವಾಸಿಸುತ್ತಿದ್ದರು. ನಾಲ್ಕನೇ ಮಹಡಿಯಲ್ಲಿ ರೂಮ್ ಬಾಡಿಗೆ ಪಡೆದಿದ್ದರು. ಇದೀಗ ಅದೇ ರೂಮಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜೊತೆಗೆ ಅವರ ರೂಮಿನಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನನ್ನ ಈ ನಿರ್ಧಾರಕ್ಕೆ ನಾನೇ ಕಾರಣ ಎಂದು ಬರೆದುಕೊಂಡಿರುವುದು ಗೊತ್ತಾಗಿದೆ. ಅವರೇ ಈ ಡೆತ್ ನೋಟ್ ಬರೆದಿಟ್ಟಿದ್ದಾರಾ ಎಂಬೆಲ್ಲಾ ವಿಚಾರಗಳು ತನಿಖೆಯ ವೇಳೆ ಬಯಲಿಗೆ ಬರಬೇಕಿದೆ. ಹಾಗೇ ಅವರು ಆತ್ಮಹತ್ಯೆಗೆ ಶರಣಾಗಿ ಎಷ್ಟು ದಿನ ಆಗಿದೆ ಎಂಬುದು ಪೋಸ್ಟ್ ಮಾರ್ಟಮ್ ಬಳಿಕವಷ್ಟೇ ತಿಳಿಯಲಿದೆ. ಯಾಕಂದ್ರೆ ನಾಗರಾಜಪ್ಪ ಅವರು ವಾಸವಿದ್ದ ರೂಮಿನಿಂದ ದುರ್ವಾಸನೆ ಹೊರ ಬಂದಾಗಷ್ಟೇ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ತುಮಕೂರು ನಗರ ಪೊಲೀಸರು ಸ್ಥಳಕ್ಕೆ ಬಂದು, ಪರಿಶೀಲನೆ ಮಾಡಿದ್ದಾರೆ. ಪಿಎಸ್ಐ ನಾಗರಾಜಪ್ಪ ದಾವಣಗೆರೆಯಿಂದ ತುಮಕೂರಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವಂತದ್ದು ಏನಿತ್ತು ಎಂಬುದು ತನಿಖೆಯ ನಂತರ ಬಯಲಾಗಲಿದೆ.











