ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು : ಹರಿಪ್ರಸಾದ್ ಮಾತಿಗೆ ಯಾರೆಲ್ಲಾ ಪರ ವಹಿಸಿದ್ರು, ವಿರೋಧ ಮಾಡಿದ್ರು..?

suddionenews
1 Min Read

ಬೆಂಗಳೂರು: ಇಂದು ಕಾಂಗ್ರೆಸ್ ನಲ್ಲಿ ಆ ಒಂದು ಹೇಳಿಕೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಬಿಕೆ ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದರು. ಸಿಎಂ ಮಾಡೋದು ಗೊತ್ತು, ಕೆಳಗೆ ಇಳಿಸುವುದು ಗೊತ್ತು ಎಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಇದಕ್ಕೆ ಹಲವರು ಬೆಂಬಲ ಸೂಚಿಸಿಯೂ ಮಾತನಾಡಿದ್ದಾರೆ.

ಇನ್ನು ಹಲವರು ಈ ಮಾತಿಗೆ ತಿರುಗೇಟು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪರಮಾಪ್ತರಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಈ ಮಾತಿಗೆ ತಿರುಗೇಟು ನೀಡಿದ್ದು, ನಮ್ಮ ಪಕ್ಷದಲ್ಲಿ ಸಿಎಂ ಆಯ್ಕೆ ಮಾಡೋದು ಹೈಕಮಾಂಡ್ ಕಡೆಯಿಂದ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಸಿಎಂ ಆಯ್ಕೆ ಮಾಡ್ತಾರೆ. ನಾನು ಮತ್ತು ಹರಿಪ್ರಸಾದ್ ಸಿಎಂ ಆಯ್ಕೆ ಮಾಡೋದಲ್ಲ. ರಾಜ್ಯದಲ್ಲಿ ಸದ್ಯಕ್ಕಂತು ಸಿಎಂ ಬದಲಾವಣೆ ಆಗಲ್ಲ ಎಂದಿದ್ದಾರೆ.

ಇನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಹರಿಪ್ರಸಾದ್​ ಯಾವ ಕಾರಣಕ್ಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಇದು ಅನವಶ್ಯಕ, ಬಹುಶಃ ಹಾಗೆ ಹೇಳಿರೋಕೆ ಸಾಧ್ಯವಿಲ್ಲ. ನಮ್ಮ ಪಾರ್ಟಿಯಲ್ಲಿ ಆ ತರಹದ ಆಲೋಚನೆ‌ ಇಲ್ಲ. ಸಿಎಂ ಸಿದ್ದರಾಮಯ್ಯ ಬಗ್ಗೆ ಯಾವುದೇ ಅಪಸ್ವರ ಇಲ್ಲ. ಸಿಎಂ ಸದೃಢವಾಗಿದ್ದಾರೆ, ಸರ್ಕಾರವು ಸದೃಢವಾಗಿದೆ. ಐದು ಗ್ಯಾರಂಟಿ ಕೊಟ್ಟಿರುವುದೇ ನಮ್ಮ ಪಕ್ಷಕ್ಕೆ ಹೆಗ್ಗಳಿಕೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *