ಸುದ್ದಿಒನ್, ಚಿತ್ರದುರ್ಗ, ಜುಲೈ. 24 : ಕೋಟೆನಾಡು ಚಿತ್ರದುರ್ಗ ನಗರದ ಹೃದಯಭಾಗದಲ್ಲಿರುವ ಎಸ್ ಬಿಐ ಸರ್ಕಲ್ ನಲ್ಲಿ ನಾಲ್ಕೂ ದಿಕ್ಕುಗಳಿಂದ ಬರುವ ನಾಲ್ಕು ಪ್ರಮುಖ ರಸ್ತೆಗಳು ಸಂಧಿಸುವ ಈ ವೃತ್ತದಲ್ಲಿ ಮುಂಜಾನೆಯಿಂದ ರಾತ್ರಿಯವರೆಗೆ ಸಾವಿರಾರು ವಾಹನಗಳ ಸಾಲು ಸಾಲೇ ಹರಿದುಬರುತ್ತದೆ.
ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ನೆನಪಿಸುವಂತೆ ಬದಲಾಗಿರುವ ಈ ಸರ್ಕಲ್ ನಲ್ಲಿ, ಒಂದೇ ಬಾರಿಗೆ ನೂರಾರು ವಾಹನಗಳು ಪ್ರವೇಶಿಸುವುದರಿಂದ ಟ್ರಾಫಿಕ್ ಜಾಮ್ ಸಂಭವಿಸುವುದು ನಿತ್ಯದ ಕಾಯಕವಾಗಿದೆ.
ದಿನನಿತ್ಯ ಸಾವಿರಾರು ಜನರು ಹಾಗೂ ಪಾದಚಾರಿಗಳು ನಡೆದಾಡುವ ಈ ಸರ್ಕಲ್ ನಲ್ಲಿ ರಸ್ತೆ ದಾಟುವುದು ಅಕ್ಷರಶಃ ಸಾಹಸದ ಕೆಲಸವಾಗಿದೆ. ದಿನದಿನವೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟಬೇಕಾದ ದುಸ್ಥಿತಿ ಇಲ್ಲಿದೆ. ಅದರಲ್ಲೂ ಮುಖ್ಯವಾಗಿ ವಯೋವೃದ್ಧರು, ಗರ್ಭಿಣಿಯರು, ಸಣ್ಣ ಮಕ್ಕಳು, ಹಸುಗೂಸನ್ನು ಎತ್ತಿಕೊಂಡು ಸಾಗುವ ಬಾಣಂತಿಯರು, ಅಂಗವಿಕಲರು ಹಾಗೂ ಶಾಲಾ ಮಕ್ಕಳು ರಸ್ತೆ ದಾಟಲು ಹೆಜ್ಜೆ ಇಡಲು ಭಯಪಡುವಂತಾಗಿದೆ. ನಿಯಂತ್ರಣವಿಲ್ಲದೆ ಅತಿಯಾದ ವೇಗದಲ್ಲಿ ಧಾವಿಸುವ ವಾಹನಗಳ ಅಬ್ಬರಕ್ಕೆ ಪಾದಚಾರಿಗಳು ಕಂಗಾಲಾಗಿದ್ದಾರೆ.

ಈ ಸನ್ನಿವೇಶಕ್ಕೆ ಇಲ್ಲಿ ಸೂಕ್ತ ಮೂಲಸೌಕರ್ಯಗಳಿಲ್ಲದಿರುವುದೇ ಮುಖ್ಯ ಕಾರಣ. ವಾಹನಗಳ ವೇಗಕ್ಕೆ ತಡೆ ಹಾಕಲು ಇಲ್ಲಿ ಯಾವುದೇ ರೀತಿಯ ರೋಡ್ ಹಂಪ್ಸ್ ಗಳು (ವೇಗ ನಿಯಂತ್ರಕಗಳು) ಇಲ್ಲ. ಇದ್ದಬದ್ದ ಸಿಗ್ನಲ್ ಲೈಟ್ ಗಳು ಕೇವಲ ಅಲಂಕಾರಿಕ ವಸ್ತುವಾಗಿದ್ದು, ಸಂಪೂರ್ಣವಾಗಿ ಕೆಟ್ಟು ನಿಂತು ಕಾರ್ಯನಿರ್ವಹಿಸದೇ ಸತ್ತುಹೋಗಿವೆ.
ಈ ಕೂಡಲೇ ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ಸಂಚಾರಿ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ನಾಲ್ಕೂ ರಸ್ತೆಗಳಲ್ಲಿ ತಕ್ಷಣವೇ ವೈಜ್ಞಾನಿಕವಾಗಿ ರೋಡ್ ಹಂಪ್ಸ್ ಗಳನ್ನು ಅಳವಡಿಸಬೇಕು. ಜೊತೆಗೆ ಸತ್ತುಬಿದ್ದಿರುವ ಸಿಗ್ನಲ್ ಲೈಟ್ ಗಳಿಗೆ ಮರುಜೀವ ನೀಡಿ ದುರಸ್ತಿಗೊಳಿಸಬೇಕು ಹಾಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಈ ಮೂಲಕ ದಿನನಿತ್ಯ ಭೀತಿಯಲ್ಲೇ ರಸ್ತೆ ದಾಟುತ್ತಿರುವ ಪಾದಚಾರಿಗಳಿಗೆ, ಸಾರ್ವಜನಿಕರಿಗೆ ಜೀವಭಯವನ್ನು ತಪ್ಪಿಸಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಅವರು ಈ ಮೂಲಕ ಮನವಿ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











