ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 05 : ತಾಲ್ಲೂಕಿನ ಕಲ್ಲೇನಹಳ್ಳಿಯಲ್ಲಿ ಗ್ರಾಮದ ಶ್ರೀ ಜಗದ್ಗುರು ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವು ಮಂಗಳವಾರ

ಭರಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಪರಮ ಪೂಜ್ಯ ಶ್ರೀ ತಿಪ್ಪೇಸ್ವಾಮಿ ಗುರುಗಳ ಸಾನ್ನಿಧ್ಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಶ್ರೀ ಸ್ವಾಮಿಯವರ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳಿಗೆ ಚಿತ್ರದುರ್ಗದ ಪರ್ವೇಜ್ ಪಡೆದುಕೊಂಡರು. ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಜಿಲ್ಲೆಯಲ್ಲದೇ, ಹೊರ ಜಿಲ್ಲೆಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ತಮ್ಮ ಆರಾಧ್ಯ ದೈವಕ್ಕೆ ಭಕ್ತಿ ಸಮರ್ಪಿಸಿ ಧನ್ಯತಾ ಭಾವ ಮೆರೆದರು. ಡೊಳ್ಳು ಕುಣಿತ, ಗೊರವರ ಕುಣಿತ, ಗೊಂಬೆ ಕುಣಿತ, ಮಂಗಳ ವಾದ್ಯದ ತಂಡಗಳು ರಥೋತ್ಸವಕ್ಕೆ ವಿಶೇಷ ಮೆರುಗು ತಂದವು.
ಬ್ರಹ್ಮ ರಥವನ್ನು ಪ್ರಮುಖ ಬೀದಿಗಳಲ್ಲಿ ಭಕ್ತರೆಲ್ಲ ಸೇರಿ ಎಳೆದೊಯ್ದು ಅಲ್ಲಿಂದ ಪುನಃ ಮೂಲ ಸ್ಥಾನಕ್ಕೆ ತಂದರು. ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ದಾಸೋಹವನ್ನು ಶ್ರೀಮಠದ ವತಿಯಿಂದ ಅಚ್ಚುಕಟ್ಟಾಗಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಏರ್ಪಡಿಸಲಾಗಿತ್ತು .


