ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 28 : ಮಾ. 9 ಮತ್ತು 10 ರಂದು ಹೊಳಲ್ಕೆರೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ. 24 ಮತ್ತು 25 ಕ್ಕೆ ಮುಂದೂಡಲಾಗಿದೆ.
ಹೊಳಲ್ಕೆರೆಯಲ್ಲಿ ಶುಕ್ರವಾರ ಶಾಸಕ ಎಂ.ಚಂದ್ರಪ್ಪ, ತಹಸೀಲ್ದಾರ್ ಬೀಬೀ ಫಾತೀಮ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಶಾಸಕ ಎಂ.ಚಂದ್ರಪ್ಪ ಮಾತನಾಡಿ, ವಿಧಾನ ಮಂಡಲದ ಅಧಿವೇಶನ ಜರುಗುತ್ತಿದೆ ಜೊತೆಗೆ ಪರೀಕ್ಷೆಗಳು ಜರುಗುತ್ತಿವೆ. ಇದು ಜಿಲ್ಲಾ ಸಮ್ಮೇಳನವಾಗಿರುವುದರಿಂದ ಜಿಲ್ಲೆಯ ಉಸ್ತುವಾರಿ ಸಚಿವರು, ಹಾಗೂ ಎಲ್ಲ ಶಾಸಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಜೊತೆಗೆ ಕೆಲವು ಸಿದ್ಧತೆಗಳನ್ನು ತರಾತುರಿಯಾಗಿ ಏರ್ಪಡಿಸುವುದರ ಬದಲಾಗಿ ಅಚ್ಚುಕಟ್ಟಾಗಿ ಮಾಡುವುದು ಸೂಕ್ತ. ಇದಕ್ಕೆ ಅಗತ್ಯವಾದ ಎಲ್ಲ ಸಹಕಾರವನ್ನು ನೀಡುತ್ತೇನೆ. ಗೋಷ್ಠಿಗಳು, ಕಲಾತಂಡಗಳು ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ರೂಪಿಸುವಂತೆ ಶಾಸಕರು ಸೂಚಿಸಿದರು. ಇದೀ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನ ಪ್ರಚಾರದ ಕರಪತ್ರಗಳನ್ನು ಬಿಡುಗಡೆಗೊಳಿಸೊಲಾಯಿತು.
ತಹಶೀಲ್ದಾರ್ ಬೀಬೀ ಫಾತೀಮ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಶಿವಮೂರ್ತಿ, ತಾಪಂ ಇಒ ಪಿ.ವಿಶ್ವನಾಥ್, ಬಿಇಒ ಹೆಚ್. ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಎಸ್.ರೇಣುಕಾ ದೇಸಾಯಿ ಮತ್ತಿತರರಿದ್ದರು.















