ಚಿತ್ರದುರ್ಗ.ಜುಲೈ.22: ಫುಟ್ ಪಾತ್ ನಲ್ಲಿ ನಿಂತಿದ್ದ ಸಾರ್ವಜನಿಕರ ಮೇಲೆ ಅತಿವೇಗವಾಗಿ ಬಂದ ಕಾರೊಂದು ಹರಿದು, ಯುವಕನೊಬ್ಬ ದಾರುಣವಾಗಿ ಮೃತಪಟ್ಟು, ಮಹಿಳೆಯೊಬ್ಬರ ಕಾಲು ಮುರಿತವಾಗಿರುವ ಭೀಕರ ಘಟನೆ ಜಿಲ್ಲೆಯ ನುಲೇನೂರು ಬಳಿ ಸಂಭವಿಸಿದೆ.
ಹೊಳಲ್ಕೆರೆ ತಾಲೂಕಿನ ದಗ್ಗೆ ಗ್ರಾಮದ ನಿವಾಸಿ ಪ್ರದೀಪ್ ದುರ್ಮರಣಕ್ಕೀಡಾದ ದುರದೃಷ್ಟಕರ ಯುವಕ. ನುಲೇನೂರು ಬಳಿ ರಸ್ತೆ ಪಕ್ಕದ ಫುಟ್ ಪಾತ್ ನಲ್ಲಿ ಜನರು ನಿಂತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಬಂದ ಕಾರು ನೇರವಾಗಿ ಅವರ ಮೇಲೆ ಹರಿದಿದೆ. ಅಪಘಾತದ ರಭಸಕ್ಕೆ ಪ್ರದೀಪ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರೆ, ಜೊತೆಯಲ್ಲಿದ್ದ ಮಹಿಳೆಯೊಬ್ಬರ ಕಾಲು ಮುರಿತವಾಗಿದೆ.. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಕಾರು ಅತಿವೇಗವಾಗಿ ಬಂದು ಫುಟ್ ಪಾತ್ ನಲ್ಲಿದ್ದವರಿಗೆ ಢಿಕ್ಕಿ ಹೊಡೆದ ಭೀಕರ ದೃಶ್ಯವು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










