ಚಿಕ್ಕಬಳ್ಳಾಪುರ: 2024ರ ವಿಧಾನಸಭಾ ಚುನಾವಣೆಗೆ ಎಲ್ಲಾ ರೀತಿಯಿಂದಲೂ ತಯಾರಿ ನಡೆಸುತ್ತಿರುವ ಬಿಜೆಪಿ ಅದರ ಭಾಗವಾಗಿ ಜನೋತ್ಸವ ಕಾರ್ಯಕ್ರಮ ಕೂಡ ಹಮ್ಮಿಕೊಂಡಿತ್ತು. ಆದರೆ ಇಂದು ಸಚಿವ ಉಮೇಶ್ ಕತ್ತಿಯವರು ಹಠಾತ್ ನಿಧನರಾಗಿದ್ದಾರೆ. ಇದರಿಂದ ಬಿಜೆಪಿ ನಾಯಕರು ಕೂಡ ಆಘಾತಗೊಂಡಿದ್ದಾರೆ. ಹೀಗಾಗಿ ಬಿಜೆಪಿ ಜನೋತ್ಸವ ಯಾತ್ರೆಯನ್ನು ಮುಂದೂಡಲಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವ ಮುನಿರತ್ನ, ಜನೋತ್ಸವ ಯಾತ್ರೆಯನ್ನು ಭಾನುವಾರಕ್ಕೆ ಮುಂದೂಡಲಾಗಿದೆ. ಉಮೇಶ್ ಕತ್ತಿಯವರ ನಮ್ಮನ್ನೆಲ್ಲ ಅಗಲಿದ್ದಾರೆ. ಬಹಳ ನೋವಿನ ಸಂಗತಿಯಿದು. ಶೋಕಾಚರಣೆ ಮಾಡಲಾಗುತ್ತಿದೆ. ಹೀಗಾಗಿ ಜನೋತ್ಸವ ಕಾರ್ಯಕ್ರಮವನ್ನು ಸೆ.11ಕ್ಕೆ ಮುಂದೂಡಲಾಗಿದೆ. ಜನೋತ್ಸವಕ್ಕೆ ಹೊರಟಿದ್ದವರೆಲ್ಲಾ ಭಾನುವಾರಕ್ಕೆ ಬರಬೇಕೆಂದು ತಿಳಿಸಿದ್ದಾರೆ.
ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಸರ್ಕಾರ 3 ದಿನಗಳ ಕಾಲ ಶೋಕಾಚರಣೆ ಮಾಡುತ್ತಿದ್ದಾರೆ. ಇದರ ನಡುವೆ ನಾಯಕರಿಂದಲೇ ಜನೋತ್ಸವ ಬೇಡ ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತು. ಹೀಗಾಗಿ ಮೂರು ದಿನಗಳ ಕಾಲ ಜನೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಜನೋತ್ಸವ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಮುಂದೂಡಿಕೆಯಾಗಿಲ್ಲ. ಬದಲಿಗೆ ಈ ಹಿಂದೆ ಕೂಡ ಎರಡು ಬಾರಿ ಮುಂದೂಡಿಕೆಯಾಗಿತ್ತು. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲು ನಿಗಧಿಯಾಗಿತ್ತು. ಆದರೆ ಅಂದು ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದ ಸಂದರ್ಭವಾಗಿದ್ದರಿಂದ ಜನೋತ್ಸಾಹ ಮುಂದೂಡಿಕೆಯಾಗಿತ್ತು.