ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 01 : ಬಂಜಾರ ಸಮಾಜದ ಬಡ ಮಕ್ಕಳ ಶಿಕ್ಷಣಕ್ಕಾಗಿಯೇ ಇರುವ ಬಂಜಾರ ಬಾಲಕಿಯರ ವಿದ್ಯಾರ್ಥಿನಿಲಯದ ಜಾಗವನ್ನು ಕೆಲವರು ಮಾರಾಟ ಮಾಡುವ ಹುನ್ನಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಲಂಬಾಣಿ ಸಮಾಜದ ಮುಖಂಡ ಆರ್.ನಿಂಗಾನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತ.ರಾ.ಸು.ರಂಗಮಂದಿರದ ಎದುರಿಗಿರುವ ಬಂಜಾರ ಬಾಲಕಿಯರ ವಿದ್ಯಾರ್ಥಿನಿಲಯದ ವಿಶಾಲವಾದ ಜಾಗವನ್ನು ಮಾರಾಟ ಮಾಡಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಬದಲಾವಣೆಗಾಗಿ ನಗರಸಭೆಗೆ ಅರ್ಜಿ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಮಾಡಬಾರದೆಂದು ಮನವಿ ಮಾಡಿದ್ದೇವೆ. ತುಮಕೂರು, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯ ಬಡ ವಿದ್ಯಾರ್ಥಿಗಳು ಇಲ್ಲಿ ಓದಲು ಅವಕಾಶವಿತ್ತು. ಕೆಲವರು ಮಾರಾಟ ಮಾಡುವ ಷಡ್ಯಂತ್ರ ನಡೆಸುತ್ತಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವಿದ್ಯಾರ್ಥಿನಿಲಯದ ಜಾಗವನ್ನು ಯಾರು ಖರೀದಿ ಮಾಡಿ ಮೋಸ ಹೋಗಬಾರದೆಂದು ಆರ್.ನಿಂಗಾನಾಯ್ಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸೂರಗೊಂಡನಹಳ್ಳಿಯ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್ಕುಮಾರ್ ಮಾತನಾಡಿ ಬಂಜಾರ ಬಾಲಕಿಯರ ವಿದ್ಯಾರ್ಥಿನಿಲಯದ ಜಾಗವನ್ನು ಮಾರಾಟ ಮಾಡಲು ಯಾರಿಗೂ ಅವಕಾಶವಿಲ್ಲ. ಹಾಗಾಗಿ ನಮ್ಮ ಜನಾಂಗದ ಜಾಗವನ್ನು ಯಾರಾದರೂ ಕೊಂಡುಕೊಂಡರೆ ಮುಂದೆ ಆಗಬಹುದಾದ ನಷ್ಟಕ್ಕೆ ನಾವುಗಳು ಹೊಣೆಗಾರರಲ್ಲ ಎಂದು ಎಚ್ಚರಿಸಿದರು.

ಶಂಕರ್ನಾಯ್ಕ್, ರಮೇಶ್ನಾಯ್ಕ, ತಿಪ್ಪೇಶನಾಯ್ಕ, ಕುಬೇರನಾಯ್ಕ, ಬಾಲ್ಯಾನಾಯ್ಕ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.





















