ಕಬ್ಬಿಗೆ 3500 ಬೆಂಬಲ ಬೆಲೆ ಘೋಷಿಸಿ : ಕೆಟಿ ತಿಪ್ಪೇಸ್ವಾಮಿ

1 Min Read

ಸುದ್ದಿಒನ್, ಹಿರಿಯೂರು, ನವೆಂಬರ್. 07  : ಸರ್ಕಾರ ಕೂಡಲೇ ರೈತರ ಕಬ್ಬಿಗೆ 3500 ರೂಪಾಯಿ ನಿಗದಿ ಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಗ್ರೇಡ್ -2 ತಹಶೀಲ್ದಾರ್ ಸಿಜೆ ಕೃಷ್ಣಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಬೆಳಗಾಂ ಜಿಲ್ಲೆಯ ಕುರ್ಲಾಪುರ್ ಕ್ರಾಸ್ ಬಳಿ ರೈತ ಸಂಘದ ಹಾಗೂ ವಿವಿಧ ಸಂಘಟನೆಗಳು ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಬೆಳೆದ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಬೇಡಿಕೆಯನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಕೀಟನಾಶಕ ಮತ್ತು ರೈತರ ಬಳಸುವ ಪರಿಕರಗಳ ಬೆಲೆ ದುಬಾರಿಯಾಗಿದೆ. ಇದರಿಂದ ಬಹುತೇಕ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ದಾರಿ ಹಿಡಿದಿದ್ದಾರೆ. ಒಂದು ಟನ್ ಕಬ್ಬಿನಿಂದ ಅನೇಕ ಉತ್ಪನ್ನಗಳ ಮೂಲಕ ಸರ್ಕಾರಗಳಿಗೆ ಬಹುದೊಡ್ಡ ಆದಾಯ ಬರುತ್ತದೆ. ಆದರೆ ಕಬ್ಬು ಬೆಳೆದ ರೈತರಿಗೆ ನಾನಾ ರೀತಿಯ ಮೋಸಗಳು ನಿರಂತರವಾಗಿ ನಡೆಯುತ್ತಿವೆ. ಈ ಹೋರಾಟದಲ್ಲಿ ತೊಡಗಿರುವ ರೈತರು ಸರ್ಕಾರದ ಮುಂದೆ ಇಟ್ಟಿರುವ ಎಲ್ಲಾ ಬೇಡಿಕೆಗಳನ್ನ ಗಂಭೀರವಾಗಿ ಪರಿಗಣಿಸಿ, ರೈತರ ಬೇಡಿಕೆಗಳನ್ನ ಈಡೇರಿಸಬೇಕು ಎಂದು ಜಿಲ್ಲಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಈರಣ್ಣ, ದೊರೆ ಸ್ವಾಮಿ, ರಾಮಣ್ಣ, ರಾಮಕೃಷ್ಣಪ್ಪ, ಬಾಲಕೃಷ್ಣ, ಬಿ ಆರ್ ರಂಗಸ್ವಾಮಿ, ತಿಮ್ಮಯ್ಯ, ಲಕ್ಷ್ಮಣ, ತಿಪ್ಪೇಸ್ವಾಮಿ, ರವಿಕುಮಾರ್, ಶಶಿಧರ, ಮಂಜುನಾಥ್, ರಾಮಣ್ಣ, ಕರಿಯಪ್ಪ, ಗೋವಿಂದಪ್ಪ, ಸೇರಿದಂತೆ ಮುಂತಾದವರಿದ್ದರು.

Share This Article