ಬೆಳಗಾವಿ ಅಧಿವೇಶನದಲ್ಲಿ ಕಾಂತರಾಜ್ ಆಯೋಗದ ವರದಿ ಸ್ವೀಕರಿಸಿ : ಅಬ್ದುಲ್ ಮಜೀದ್

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.06 : ನ್ಯಾಯಯುತ ಸಂವಿಧಾನಬದ್ದ ಹಕ್ಕುಗಳನ್ನು ಸರ್ಕಾರ ಕೂಡಲೆ ಪರಿಗಣಿಸಿ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ವಿಧಾನಸೌಧದಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಹೊರಟಿರುವ ಜಾಥ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿತು.

ಒನಕೆ ಓಬವ್ವ ವೃತ್ತದಲ್ಲಿ ಜಾಥವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಪಿ.ಐ. ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಾಂತರಾಜ್ ಆಯೋಗದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಅನೇಕ ವರ್ಷಗಳೇ ಕಳೆದಿದ್ದರೂ ಇನ್ನು ಜಾರಿಗೆ ತರುವಲ್ಲಿ ಆಳುವ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಹಾಗಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಕೂಡಲೆ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟರ ಒಳಮೀಸಲಾತಿ ಹಂಚಿಕೆಯಲ್ಲಿ ಅಸ್ಪøಶ್ಯರು ಎನ್ನುವ ಕಾರಣಕ್ಕಾಗಿ ಸಮುದಾಯಕ್ಕೆ ಅನ್ಯಾಯವಾಗುತ್ತಲೆ ಬರುತ್ತಿದೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಕಳೆದ 30 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಶೀಘ್ರವೇ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿದರು.

ರಾಜ್ಯದಲ್ಲಿ ಮುಸಲ್ಮಾನರಿಗಿದ್ದ 2 ಬಿ.ಯಡಿ ನಾಲ್ಕು ಪರ್ಸೆಂಟ್ ಮೀಸಲಾತಿಯನ್ನು ಹಿಂದಿನ ಬಸವರಾಜ್ ಬೊಮ್ಮಾಯಿ ಸರ್ಕಾರ ರದ್ದುಪಡಿಸಿತ್ತು. ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ 2 ಬಿ. ಮೀಸಲಾತಿಯನ್ನು ಪುನರ್ ಘೋಷಿಸಿ ಶೇ.ನಾಲ್ಕರಿಂದ ಎಂಟು ಪರ್ಸೆಂಟ್‍ಗೆ ಹೆಚ್ಚಿಸುವಂತೆ ಮನವಿ ಮಾಡಿದರು.

ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಜಾಥ ಉದ್ದೇಶಿಸಿ ಮಾತನಾಡಿ ದಲಿತರು, ಮುಸಲ್ಮಾನರು, ಹಿಂದುಳಿದಿರುವ ಮತಗಳನ್ನು ಪಡೆದು ಗೆದ್ದಿರುವ ಚಿತ್ರದುರ್ಗ ಶಾಸಕ ಬೆಳಗಾವಿಯ ಸುರ್ವಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಾಣುತ್ತಿಲ್ಲ. ನಿಜವಾಗಿಯೂ ಮತದಾರರ ಋಣ ನಿಮ್ಮ ಮೇಲಿದ್ದರೆ ದಲಿತರು, ಮುಸಲ್ಮಾನರ ಪರ ಧ್ವನಿಎತ್ತಿ. ಎಲ್ಲಿಯವರೆಗೂ ಸುಳ್ಳು ಇರುತ್ತದೋ ಅಲ್ಲಿಯತನಕ ಎಸ್.ಡಿ.ಪಿ.ಐ. ಜೀವಂತವಾಗಿದ್ದು, ಹೋರಾಟ ನಡೆಸುತ್ತದೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಮ್ಮ ಶಕ್ತಿಯನ್ನು ತೋರಿಸುತ್ತವೆಂದು ಗುಡುಗಿದರು.

ಎಸ್.ಡಿ.ಪಿ.ಐ. ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ, ಭೀಮಯಾತ್ರೆ ಬಳಗದ ಮುಖಂಡ ಭಾಸ್ಕರ್‍ಪ್ರಸಾದ್, ಕುಂಚಿಗನಹಾಳ್ ಮಹಾಲಿಂಗಪ್ಪ, ಎಸ್.ಡಿ.ಪಿ.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಕೀರ್‍ಹುಸೇನ್, ಉಪಾಧ್ಯಕ್ಷ ಕಮ್ರಾನ್‍ಆಲಿ ಸೇರಿದಂತೆ ಪದಾಧಿಕಾರಿಗಳು ಜಾಥದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks