ಕಾಬೂಲ್: ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯಗಳಾದ ಪಕ್ತಿಯಾ, ಪಕ್ತಿಕಾ ಮತ್ತು ಕುನಾರ್ಗಳ ಮೇಲೆ ಪಾಕಿಸ್ತಾನ ನಡೆಸಿರುವ ಗಡಿ ಆಚೆಯ ಸೇನಾ ದಾಳಿಗಳು ಭಾರಿ ಪ್ರಮಾಣದ ನಾಗರಿಕರ ಸಾವು-ನೋವು ಮತ್ತು ವಿನಾಶಕ್ಕೆ ಕಾರಣವಾಗಿವೆ ಎಂದು ಅಫ್ಘಾನಿಸ್ತಾನದ ತಾಲೀಬಾನ್ ಸರ್ಕಾರ ತಿಳಿಸಿದೆ.
ಕಳೆದ ರಾತ್ರಿ ನಡೆದ ಈ ದಾಳಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 36 ನಾಗರಿಕರು ಸಾವನ್ನಪ್ಪಿದ್ದು, 163 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಾಲೀಬಾನ್ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತ್ರಾತ್ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ದಾಳಿಯ ತೀವ್ರತೆಗೆ ಮೂರು ವಸತಿ ಗೃಹಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ.
ಪಕ್ತಿಯಾ ಪ್ರಾಂತ್ಯದ ಚಮ್ಕಾನಿ ಜಿಲ್ಲೆಯ ಮಾಂಡೋಖೈಲ್ ಗ್ರಾಮದಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ನಾಗರಿಕರ ವಸತಿ ಗೃಹವೊಂದರ ಮೇಲೆ ಮೊದಲ ಬಾರಿಗೆ ಬಾಂಬ್ ದಾಳಿ ನಡೆಸಿದವು. ಈ ವೇಳೆ ಮನೆಯಲ್ಲಿದ್ದ ವೃದ್ಧರೊಬ್ಬರು ಮತ್ತು ಮಗು ಸಾವನ್ನಪ್ಪಿದರೆ, ಕುಟುಂಬದ ಇತರ ಸದಸ್ಯರು ಗಾಯಗೊಂಡರು. ತದನಂತರ, ಗಾಯಾಳುಗಳ ರಕ್ಷಣೆಗಾಗಿ ಸ್ಥಳೀಯ ಗ್ರಾಮಸ್ಥರು ಧಾವಿಸಿ ಬಂದಾಗ, ಪಾಕಿಸ್ತಾನಿ ಪಡೆಗಳು ಅದೇ ಸ್ಥಳದ ಮೇಲೆ ಎರಡನೇ ಬಾರಿಗೆ ಭೀಕರ ಬಾಂಬ್ ದಾಳಿ ನಡೆಸಿದವು. ಈ ಎರಡನೇ ದಾಳಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 28 ಗ್ರಾಮಸ್ಥರು ಸ್ಥಳದಲ್ಲೇ ಸಾವನ್ನಪ್ಪಿದ್ದು, 158 ಜನರು ಗಾಯಗೊಂಡಿದ್ದಾರೆ ಎಂದು ಫಿತ್ರಾತ್ ವಿವರಿಸಿದ್ದಾರೆ.

ಇದರ ಬೆನ್ನಲ್ಲೇ ಪಕ್ತಿಕಾ ಪ್ರಾಂತ್ಯದ ಗಿಯಾನ್ ಜಿಲ್ಲೆಯ ವಾಲೂಸ್ಟ್ ಗ್ರಾಮದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಆರು ನಾಗರಿಕರು ಮೃತಪಟ್ಟಿದ್ದಾರೆ. ಕುನಾರ್ ಪ್ರಾಂತ್ಯದ ಮನೋಗೈ ಜಿಲ್ಲೆಯ ಬರೋಲೋ ಗ್ರಾಮದಲ್ಲೂ ವಸತಿ ಗೃಹವೊಂದನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಅಲ್ಲಿ ಮನೆ ಸಂಪೂರ್ಣ ನಾಶವಾಗಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮತ್ತೊಂದೆಡೆ, ಈ ಭೀಕರ ದಾಳಿಯನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನದ ಮಾಹಿತಿ ಸಚಿವ ಅಟಾವುಲ್ಲಾ ತರಾರ್, ಗಡಿ ವಲಯದಲ್ಲಿ ತಮ್ಮ ಭದ್ರತಾ ಪಡೆಗಳು ಸುಸಜ್ಜಿತ ಗುಪ್ತಚರ ಆಧಾರಿತ ಭೂ ಕಾರ್ಯಾಚರಣೆ ಮತ್ತು ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ, ಬಲೂಚಿಸ್ತಾನ್ ಮತ್ತು ಕರಾಚಿಯ ಅರೆಸೇನಾ ಶಿಬಿರಗಳ ಮೇಲೆ ನಡೆದ ಸರಣಿ ಭಯೋತ್ಪಾದಕ ದಾಳಿಗಳಿಗೆ ಪ್ರತಿಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











