ಬೆಂಗಳೂರು: ಬಿರು ಬಿಸಿಲಿನಿಂದ ಬೆಂದಿದ್ದ ಬೂತಾಯಿಗೂ, ಸೆಕೆ ಸೆಕೆ ಅಂತ ಒದ್ದಾಡುತ್ತಿದ್ದ ಜನತೆಗೂ, ಭೂಮಿ ಮೇಲೆ ಕಾಲಿಡಲಾಗದೆ ಸಂಕಟ ಪಡುತ್ತಿದ್ದ ಪ್ರಾಣಿಗಳಿಗೂ ಒಟ್ಟಾರೆ ಸಕಲ ಜೀವ ರಾಶಿಗಳಿಗೂ ವರುಣರಾಯ ತಂಪೆರೆದಿದ್ದಾನೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಮಿಂಚು, ಗುಡುಗು ಮತ್ತು ಗಾಳಿ ಸಹಿತ ಮಳೆಯಾಗಲಿದೆ ಎಂದು ತಿಳಿಸಿರುವ ಹವಮಾನ ಇಲಾಖೆ ಎಚ್ಚರದಿಂದ ಇರಲು ಸೂಚನೆ ನೀಡಿದೆ.
ಮೇ 3ರಿಂದ ಮೇ 5ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಮೇ 4 ಮತ್ತು 5 ರಂದು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ. ಬೀದರ್, ಕಲಬುರ್ಗಿ, ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದ್ದು, ಉಳಿದಂತೆ ಶುಷ್ಕ ಹವಾಮಾನ ಮುಂದುವರಿಯಲಿದೆ. ಮೇ 3 ರಂದು ಬೀದರ್ ಮತ್ತು ಕಲಬುರ್ಗಿಯಲ್ಲಿ ತಾಪಮಾನ ಏರಿಕೆಯ ಮುನ್ಸೂಚನೆ ಇದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ, ತಣ್ಣಗೆ ಬೀಸುತ್ತಿರುವ ಗಾಳಿಯನ್ನ ನೋಡಿದರೆ ರಾತ್ರು ವೇಳೆಗೆ ಜೋರು ಮಳೆ ಬೀಳುವ ಸಾಧ್ಯತೆ ಇದೆ. ಕಳೆದ ಎರಡ್ಮೂರು ದಿನದಿಂದ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿಯ ಜೀವನ ಹೈರಾಣಾಗಿದೆ. ಇನ್ನು ಗುಡುಗು ಸಹಿತ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಮಾನ ಇಲಾಖೆ ನೀಡಿದ್ದು, ಕೊಂಚ ಜಾಗರೂಕರಾಗಿರಬೇಕಾಗಿದೆ.



















