ಬೆಂಗಳೂರು.ಜೂನ್.28: ಕನ್ನಡ ಚಿತ್ರರಂಗ ಹಿರಿಯ ನಿರ್ದೇಶಕ ಹಾಗೂ ಪ್ರಸಿದ್ಧ ಬರಹಗಾರ ಎನ್.ಎಸ್. ಶಂಕರ್ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಎದುರಿಸುತ್ತಿದ್ದ ಅವರು, ಇಂದು ನಿದ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಕನ್ನಡ ಸಿನಿರಂಗಕ್ಕೆ ‘ಉಲ್ಟಾ ಪಲ್ಟಾ’ದಂತಹ ಬ್ಲಾಕ್ಬಸ್ಟರ್ ಸಿನಿಮಾ ನೀಡಿದ ಹೆಗ್ಗಳಿಕೆ ಇವರದ್ದಾಗಿತ್ತು. ಕೇವಲ ಬೆಳ್ಳಿಪರದೆಗೆ ಸೀಮಿತವಾಗದ ಶಂಕರ್ ಅವರು ‘ಪ್ರಜಾವಾಣಿ’, ‘ಮುಂಗಾರು’ ಮತ್ತು ‘ಲಂಕೇಶ್ ಪತ್ರಿಕೆ’ಯಂತಹ ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಸುದೀರ್ಘ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲೂ ತೀವ್ರ ಆಸಕ್ತಿ ಹೊಂದಿದ್ದ ಅವರು, ಹಲವು ಉತ್ತಮ ಪುಸ್ತಕಗಳನ್ನು ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದರು.
ಮೂಲತಃ ಶಿವಮೊಗ್ಗದವರಾದ ಎನ್.ಎಸ್. ಶಂಕರ್ ಅವರ ಬಾಲ್ಯದ ದಿನಗಳು ಕಳೆದಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ. ಮೈಸೂರಿನಲ್ಲಿ ಪ್ರೌಢಶಿಕ್ಷಣ ಹಾಗೂ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದ ಅವರು, ತಮ್ಮ ಸೃಜನಶೀಲ ಬರಹ ಹಾಗೂ ವಿಶಿಷ್ಟ ನಿರ್ದೇಶನದ ಮೂಲಕ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದರು.






