ಬೆಂಗಳೂರು: ಎಸ್ಸಿ ಒಳಮೀಸಲಾತಿ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದು, ಒಂದಷ್ಟು ವಿಚಾರಗಳು ಚರ್ಚೆಯಾಗಲಿವೆ. ಆ ಚರ್ಚೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೋಗ್ತಾ ಇದ್ದು, ಯಾಕೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಅವರು ಏನ್ ಮಾಡ್ತಾ ಇದ್ದಾರೆ ಅನ್ನೋದು ನಮಗೂ ಮಾಹಿತಿ ಬೇಕಲ್ಲ. ಏನು, ಎಂಥ ಅಂತ ನೋಡ್ಕೊಂಡು ಬರ್ತೀನಿ ಅಷ್ಟೇ. ಅದು ಅವರಿಗೆ ಸಂಬಂಧ ಪಟ್ಟ ವಿಚಾರ ಒಕೆ. ಆದ್ರೆ ನಮಗೂ ನಾಲೆಡ್ಜ್ ಇರಬೇಕಲ್ಲ. ಏನದು, ಹೇಗೆ ಎಂಬುದು ಅದಕ್ಕೆ ಹೋಗ್ತಾ ಇದ್ದೇನೆ. ಮಾಹಿತಿಯನ್ನ ಪಡೆಯೋದಕ್ಕೆ ಹೋಗ್ತಾ ಇದ್ದೀನಿ. ಹೋದ ಮೇಲೆ ಚರ್ಚೆ ಶುರುವಾಗಬಹುದು ಎಂದಿದ್ದಾರೆ. ದಲಿತ ಸಿಎಂ ವಿಚಾರ ಚರ್ಚೆಗೆ ಬರಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಗೊತ್ತಿಲ್ಲ. ಅಲ್ಲಿ ಹೋದ ಮೇಲೆ ಅದರ ಬಗ್ಗೆ ಗೊತ್ತಾಗುತ್ತೆ. ನನಗೆ ಏನು ಆಹ್ವಾನ ಬಂದಿಲ್ಲ. ಹೋಗುವುದಕ್ಕೆ ನಮಗೂ ಅಧಿಕಾರ ಇದೆ. ಇಲ್ಲ ಅಂತ ಏನಿಲ್ಲ ಎಂದಿದ್ದಾರೆ.
ಅಹಿಂದ ನಾಯಕರು ಹೈಕಮಾಂಡ್ ಭೇಟಿಯಾಗ್ತಾರೆ ಎಂಬ ಮಾತಿಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಈಗ ಸದ್ಯಕ್ಕೆ ಡೆಲ್ಲಿಗೆ ಹೋಗೋ ಯಾವ ಪ್ಲ್ಯಾನ್ ಕೂಡ ಇಲ್ಲ ಎಂದಿದ್ದಾರೆ. ದೆಹಲಿಯಲ್ಲಿ ನಮ್ಮ ಇಲಾಖೆ ಕೆಲಸ ಇದ್ರೆ ಹೋಗ್ತೇನೆ ಸುಮ್ನೆ ಹೋಗೋದಿಲ್ಲ ಎಂದಿದ್ದಾರೆ. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಸಿಎಂ ಸ್ಥಾನ ಮಿಸ್ ಆಗಿದ್ದರ ಬಗ್ಗೆ ಮಾತನಾಡಿ, ಈಗಿನದ್ದಲ್ಲ ಅವರ ಹೆಸರು ಬರ್ತಾ ಇರೋದು. 90ನಲ್ಲಿ ಖರ್ಗೆ ಅವರು ಹೋದಾಗಿನಿಂದ ಈ ವಿಚಾರ ಇದೆ. ಅವರು ಅರ್ಹರಿದ್ದರು ಆದರೂ ಸಿಕ್ಕಿಲ್ಲ ಎಂಬ ಚರ್ಚೆ ನಡೀತಾ ಇದೆ. ಅವರಿಗೂ ಅವಕಾಶ ತಪ್ಪಿದೆ. ಸಂದರ್ಭ ಬಂದ ಮೇಲೆ ಬರಬಹುದು ಎಂದಿದ್ದಾರೆ.


