ನವದೆಹಲಿ: ಹನುಮಂತನ ಜನ್ಮಸ್ಥಳ ಕುರಿತ ದೀರ್ಘಕಾಲದ ವಿವಾದಕ್ಕೆ ಸಂಬಂಧಿಸಿದ ಮಹತ್ವದ ಅರ್ಜಿಯ ವಿಚಾರಣೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ನಡೆಸಿದರೂ, ತಕ್ಷಣದ ಮಧ್ಯಪ್ರವೇಶಕ್ಕೆ ನಿರಾಕರಿಸಿದೆ. ಅರ್ಜಿದಾರರು ಮೊದಲು ಕರ್ನಾಟಕ ಹೈಕೋರ್ಟ್ನಲ್ಲೇ ಪರಿಹಾರ ಹುಡುಕಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಪೀಠವು, ಕರ್ನಾಟಕ ಹೈಕೋರ್ಟ್ನಲ್ಲಿ “ಬೀಯಿಂಗ್ ಸ್ಪೋಕನ್ ಟು” ಎಂಬ ಕಾರ್ಯವಿಧಾನ ಇರುವುದರಿಂದ ಅಗತ್ಯವಿದ್ದಲ್ಲಿ ಅಲ್ಲಿಯೇ ಆದೇಶದ ಸ್ಪಷ್ಟೀಕರಣ ಅಥವಾ ತಿದ್ದುಪಡಿ ಪಡೆಯಬಹುದಾಗಿದೆ ಎಂದು ತಿಳಿಸಿತು.

ಹೈಕೋರ್ಟ್ ತೀರ್ಪಿನ ವಿರುದ್ಧ ಆಕ್ಷೇಪ
ಅರ್ಜಿದಾರರ ಪರ ವಕೀಲರು, ಕರ್ನಾಟಕ ಹೈಕೋರ್ಟ್ ತೀರ್ಪು ಕಾಯ್ದಿರಿಸಿದ ಬಳಿಕ ಅದನ್ನು ಮುಕ್ತ ನ್ಯಾಯಾಲಯದಲ್ಲಿ ಪ್ರಕಟಿಸಿ ಸಹಿ ಮಾಡಿತ್ತು. ಆದರೆ ಬಳಿಕ ಅದೇ ಪ್ರಕರಣವನ್ನು ಮತ್ತೆ ವಿಚಾರಣೆಗೆ ಪಟ್ಟಿ ಮಾಡಿರುವುದು ಕಾನೂನುಬದ್ಧವಲ್ಲ ಎಂದು ವಾದಿಸಿದರು.
ಒಮ್ಮೆ ತೀರ್ಪು ನೀಡಿದ ನಂತರ ನ್ಯಾಯಾಲಯವು “ಫಂಕ್ಟಸ್ ಅಫಿಷಿಯೋ” ಆಗುತ್ತದೆ. ಅಂದರೆ ಅದೇ ಪ್ರಕರಣವನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ ಎಂದು ಅವರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, “ಈ ವಿಷಯವನ್ನು ಕರ್ನಾಟಕ ಹೈಕೋರ್ಟ್ವೇ ಪರಿಶೀಲಿಸಲಿ. ಅಲ್ಲಿಯೇ ಸೂಕ್ತ ಪರಿಹಾರ ಲಭ್ಯವಿದೆ” ಎಂದು ಹೇಳಿ ಅರ್ಜಿಗೆ ತಕ್ಷಣದ ಆದೇಶ ನೀಡಲು ನಿರಾಕರಿಸಿದರು.
ಏನಿದು ಹನುಮಾನ್ ಜನ್ಮಭೂಮಿ ವಿವಾದ?
ಈ ವಿವಾದ ಎರಡು ಧರ್ಮಗಳ ನಡುವಿನದ್ದಲ್ಲ. ಬದಲಾಗಿ ಎರಡು ಹಿಂದೂ ಧಾರ್ಮಿಕ ಸಂಸ್ಥೆಗಳ ನಡುವೆ ನಡೆಯುತ್ತಿರುವ ವಾದವಾಗಿದೆ.
ಒಂದು ಕಡೆ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ (TTD) ಇದ್ದರೆ, ಮತ್ತೊಂದು ಕಡೆ ಕರ್ನಾಟಕದ ಶ್ರೀ ಹನುಮಾನ್
ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದೆ.
ಟಿಟಿಡಿಯ ಪ್ರಕಾರ, ತಿರುಮಲದ ಅಂಜನಾದ್ರಿ ಪರ್ವತವೇ ಹನುಮಂತನ ಜನ್ಮಸ್ಥಳ. ಈ ಸಂಬಂಧ ತಜ್ಞರ ಸಮಿತಿ ವರದಿ, ಪುರಾಣಗಳು, ತಾಮ್ರಫಲಕಗಳು ಹಾಗೂ ಐತಿಹಾಸಿಕ ದಾಖಲೆಗಳನ್ನು ಆಧಾರವಾಗಿ ಉಲ್ಲೇಖಿಸಲಾಗಿದೆ.ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕದ ಟ್ರಸ್ಟ್, ವಾಲ್ಮೀಕಿ ರಾಮಾಯಣದ ಪ್ರಕಾರ ಹನುಮಂತನು ಕಿಷ್ಕಿಂಧಾ ಪ್ರದೇಶದ ಅಂಜನಹಳ್ಳಿಯಲ್ಲಿ ಜನಿಸಿದ್ದಾನೆ ಎಂದು ವಾದಿಸುತ್ತಿದೆ. ಈ ಪ್ರದೇಶವನ್ನು ಇಂದಿನ ಹಂಪಿ ಹಾಗೂ ತುಂಗಭದ್ರಾ ನದಿ ತೀರದ ಭಾಗಗಳೊಂದಿಗೆ ಗುರುತಿಸಲಾಗುತ್ತಿದೆ.
2020ರಲ್ಲಿ ಟಿಟಿಡಿ ನೇಮಿಸಿದ್ದ ಎಂಟು ಸದಸ್ಯರ ತಜ್ಞರ ಸಮಿತಿ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂದು ವರದಿ ನೀಡಿತ್ತು. ಅದರ ಆಧಾರದಲ್ಲಿ ವಿಶೇಷ ಕಿರುಪುಸ್ತಕವನ್ನೂ ಪ್ರಕಟಿಸಲಾಗಿತ್ತು.
ಇದಕ್ಕೆ ಪ್ರತಿಯಾಗಿ ಕರ್ನಾಟಕದ ಟ್ರಸ್ಟ್ ಆರು ಪುಟಗಳ ಆಕ್ಷೇಪಣಾ ಪತ್ರ ಸಲ್ಲಿಸಿತ್ತು. ಕಳೆದ ವರ್ಷ ಎರಡೂ ಕಡೆಯವರು ಚರ್ಚೆ ನಡೆಸಿದರೂ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಸುಪ್ರೀಂ ಕೋರ್ಟ್ನ ಇತ್ತೀಚಿನ ನಿಲುವಿನಿಂದಾಗಿ ಹನುಮಾನ್ ಜನ್ಮಭೂಮಿ ವಿವಾದದ ಕಾನೂನು ಹೋರಾಟ ಸದ್ಯಕ್ಕೆ ಕರ್ನಾಟಕ ಹೈಕೋರ್ಟ್ನಲ್ಲೇ ಮುಂದುವರಿಯಲಿದೆ. ಆದೇಶಕ್ಕೆ ಸಂಬಂಧಿಸಿದ ತಾಂತ್ರಿಕ ಹಾಗೂ ಕಾನೂನು ಆಕ್ಷೇಪಣೆಗಳನ್ನು ಮೊದಲು ಹೈಕೋರ್ಟ್ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿರುವುದರಿಂದ, ಈ ವಿವಾದ ಇನ್ನೂ ಅಂತ್ಯ ಕಂಡಿಲ್ಲ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















