ಮೈಸೂರು: ಇಂದು ನಾಡಿನೆಲ್ಲೆಡೆ ಆಯುಧ ಪೂಜಾ ಸಂಭ್ರಮ ಮನೆ ಮಾಡಿದೆ. ತಮ್ಮ ತಮ್ಮ ಮನೆಯಲ್ಲಿರುವ ಆಯುಧ, ವಾಹನಗಳನ್ನು ಸ್ವಚ್ಛಗೊಳಿಸಿ, ಪೂಜೆಯಲ್ಲಿ ತೊಡಗಿಕೊಂಡಿದ್ದಾರೆ. ಇಂದು ಆಯುಧ ಪೂಜೆ ನಾಳೆ ದಸರಾ ಸಂಭ್ರಮ. ಹೀಗಾಗಿ ಹೂವು, ಹಣ್ಣು, ಕಾಯಿ ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ.
ಇನ್ನು ಆಯುಧ ಪೂಜೆ ಎಂದರೆ ಮೈಸೂರಿನತ್ತ ಎಲ್ಲರ ಚಿತ್ತ ಹೋಗುತ್ತದೆ. ಹೇಗೆಲ್ಲಾ ಪೂಜೆ ನಡೆಯುತ್ತದೆ ಎಂಬ ಕುತೂಹಲವು ಇರುತ್ತದೆ. ಬೆಳಗ್ಗೆ 6 ಗಂಟೆಗೇನೆ ಚಂಡಿಕಾ ಹೋಮ ಆರಂಭವಾಗಿದೆ. ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಕೊಂಡೊಯ್ಯಲಾಗಿದೆ. ಅಲ್ಲಿಂದ ಆಯುಧಗಳನ್ನು ಶುಚಿಗೊಳಿಸಿ, ಅರಮನೆಗೆ ತರಲಾಗಿದೆ. ಇದೇ ವೇಳೆ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಗಳಿಗೂ ಪೂಜೆ ನೆರವೇರಿಸಿದ್ದಾರೆ.

ಯದುವೀರ್ ಕೃಷ್ಣದತ್ತ ಒಡೆಯರ್ ಅವರು ರಾಜಪುರೋಹಿತರ ಮಾರ್ಗದರ್ಶನದಂತೆ ಆಯುಧ ಪೂಜೆ ಮಾಡಿದ್ದಾರೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸು, ಅರಮನೆಯಲ್ಲಿರುವ ಐಷರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ಸಲ್ಲಿಸಿದ್ದಾರೆ. ಸಂಜೆ ವೇಳೆಗೆ ಖಾಸಗಿ ದರ್ಬಾರ್ ನಡೆಯಲಿದೆ. ಬೆಳ್ಳಿ ದ್ವಾರದಿಂದ ರಾಜರು ಪ್ರವೇಶ ಮಾಡುತ್ತಾರೆ. ಸಿಂಹಾಸನವೇರಿ ರಾಜರು ದರ್ಬಾರ್ ಮಾಡ್ತಾರೆ.
ಆನೆ ಪೂಜಾರಿ ಪ್ರಹ್ಲಾದ್ ಅವರು ಮಾಹಿತಿ ನೀಡುತ್ತಾ, ದಸರಾ ಹೊರಡುವಾಗ ಕುಶಾಲ ತೋಪು ನಡೆಸುತ್ತದೆ. ಆಗ ಪುಷ್ಪಾರ್ಚನೆ ಶುರುವಾಗುತ್ತೆ. ಆ ಸಮಯದಲ್ಲಿ ಆನೆಗೆ ವಿಶೇಷ ಪೂಜೆ ಆಗುತ್ತದೆ. ಕಾಡಿನಿಂದ ನಾಡಿಗೆ ಆನೆಗಳು ಬಂದಾಗ ಸೆಲೆಕ್ಟ್ ಮಾಡಿ, ಅರಮನೆಗೆ ಸೇರಿಸುತ್ತಾರೆ. ಶ್ರೀಕಂಠ, ಹೇಮಾವತಿ ಎಂಬ ಆನೆ ಬಂದಿದೆ. ಆ ಆನೆಗಳಿಗೆಲ್ಲಾ ಅರಣ್ಯ ಇಲಾಖೆ ಪೂಜೆಯನ್ನ ಸಲ್ಲಿಸುತ್ತದೆ ಎಂದಿದ್ದಾರೆ.


















