ಚಿತ್ರದುರ್ಗದಲ್ಲಿ ಟ್ರಾಮಾ ಸೆಂಟರ್ ಶೀಘ್ರ ಆರಂಭಗೊಳ್ಳಲಿ : ಡಾ.ಕೆ.ಸೌಮ್ಯಾ

1 Min Read

 

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಮಾಡಲು ನಿರ್ಧಾರ ಕೈಗೊಂಡಿರುವುದು ಉತ್ತಮವಾಗಿದ್ದು, ಶೀಘ್ರ ಆರಂಭಕ್ಕೆ ಸರ್ಕಾರ ಮುಂದಾಗಬೇಕೆಂದು ಸಂಜೀವಿನಿ ಜೀವರಕ್ಷಕ ಪ್ರಧಾನ ಕಾರ್ಯದರ್ಶಿ ಡಾ.ಕೆ.ಸೌಮ್ಯಾ ಆಗ್ರಹಿಸಿದ್ದಾರೆ.

 

ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವ ಪ್ರಮುಖ ಜಂಕ್ಷನ್ ಆಗಿದ್ದು ಹಿರಿಯೂರು, ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ ಹಾಗೂ ಹೊಸಪೇಟೆ ಮಾರ್ಗದ ಹೆದ್ದಾರಿಗಳಲ್ಲಿ ವಿವಿಧ ಕಾರಣಕ್ಕೆ ಅಪಘಾತಗಳು ಸಾಮಾನ್ಯವಾಗಿವೆ. ಆದರೆ ಗಂಭೀರ ಗಾಯಗೊಂಡವರ ಪ್ರಾಣ ಉಳಿಸಲು ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಇರಲಿಲ್ಲ. ಈ ಕಾರಣಕ್ಕೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಬಜೆಟ್‌ನಲ್ಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪನೆಗೆ ಮುಂದಾಗಿರುವುದು ಅತ್ಯಂತ ಸ್ವಾಗತರ್ಹ.

ಜೊತೆಗೆ ಶೀಘ್ರ ಕಾಮಗಾರಿ ಆರಂಭಗೊಂಡು ಸುಸಜ್ಜಿತ ತಂತ್ರಜ್ಞಾನ ಅಳವಡಿಸಿ, ತಜ್ಞ ವೈದ್ಯರು, ಸಿಬ್ಬಂದಿ ನಿಯೋಜಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಬೇಕು. ಈ ಮೂಲಕ ಸರ್ಕಾರದ ಆಶಯ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಕೋರಿದ್ದಾರೆ.
ಚಿತ್ರದುರ್ಗದಲ್ಲಿ ಸಂಚಾರ ನಿಯಮ ಪಾಲನೆ ಕನಸಾಗಿದೆ. ಹೆಲ್ಮೆಟ್ ಧರಿಸುವುದು, ವಾಹನಕ್ಕೆ ವಿಮೆ ಮಾಡಿಸುವಲ್ಲಿ ಸವಾರರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಅಪಘಾತಗಳು ಸಂಭವಿಸಿದ ಸಂದರ್ಭ ಪರಿಹಾರ, ಚಿಕಿತ್ಸೆ ಪಡೆಯುವಲ್ಲಿ ನಿರ್ಲಕ್ಷ್ಯವೇ ದೊಡ್ಡ ಅಡ್ಡಿಯಾಗುತ್ತಿದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಚಿತ್ರದುರ್ಗದಲ್ಲಿ ಸಂಚಾರ ನಿಯಮ ಮೇಲ್ವಿಚಾರಣೆಗಾಗಿ ಎಐ ತಂತ್ರಜ್ಞಾನದ ಕ್ಯಾಮೆರಾ ಅಳವಡಿಕೆಗೆ ಬಜೆಟ್‌ನಲ್ಲಿ ನಿರ್ಧರಿಸುವುದು ಉತ್ತಮ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯದಲ್ಲಿ ಸಂಜೀವಿನ ಜೀವರಕ್ಷಕ ಟ್ರಸ್ಟ್ ಕೈಜೋಡಿಸಲಿದ್ದು, ಶಾಲಾ-ಕಾಲೇಜು, ಜನಸಂದಣಿ ಸ್ಥಳದಲ್ಲಿ ಸಂಚಾರ ನಿಯಮ ಪಾಲಿಸಲು ಹಾಗೂ ವಿಮೆ, ವಾಹನದ ದಾಖಲೆಗಳು ಸರಿಇರಬೇಕು. ಹೆಲ್ಮೇಟ್ ಕಡ್ಡಾಯವಾಗಿ ಧರಿಸಬೇಕು. ಈ ಹೀಗೆ ಅನೇಕ ನಿಯಮಗಳ ಪಾಲನೆ ಮೂಲಕ ಅಪಘಾತ ಸಂದರ್ಭದಲ್ಲಿ ಜೀವಹಾನಿ ಆಗದ ರೀತಿ ಮುನ್ನೇಚ್ಚರಿಕೆ ವಹಿಸಬೇಕು. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರದ ಆಶಯಕ್ಕೆ ಸಂಜೀವಿನ ಜೀವರಕ್ಷಕ ಟ್ರಸ್ಟ್ ಪೂರಕವಾಗಿ ಕಾರ್ಯನಿರ್ವಹಿಸಲು ಸಿದ್ಧವಿದೆ ಎಂದು ಡಾ.ಕೆ.ಸೌಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *