ಬಂಗಾಳಿ ಚಿತ್ರರಂಗದ ಖ್ಯಾತ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ ಅವರು ಚಿತ್ರೀಕರಣದ ವೇಳೆ ಸಂಭವಿಸಿದ ದುರಂತದಲ್ಲಿ ಇಂದು ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಒಡಿಶಾದ ತಲ್ಸಾರಿ ಬೀಚ್ನಲ್ಲಿ ಧಾರಾವಾಹಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಅವರು ಸಮುದ್ರದ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ಸಂಭವಿಸಿದ ತಕ್ಷಣ ಸ್ಥಳದಲ್ಲಿದ್ದ ತಂತ್ರಜ್ಞರು ರಾಹುಲ್ ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವರ ಸ್ಥಿತಿ ಗಂಭೀರವಾಗಿದ್ದು, ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

“ಭೋಲೆ ಬಾಬಾ ಪಾರ್ ಕರೇಗಾ” ಧಾರಾವಾಹಿಯ ಚಿತ್ರೀಕರಣದ ವೇಳೆ ಭಾನುವಾರ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. 43ನೇ ವಯಸ್ಸಿನಲ್ಲಿಯೇ ನಟನ ಅಕಾಲಿಕ ನಿಧನ ಚಿತ್ರರಂಗಕ್ಕೆ ಭಾರೀ ಆಘಾತ ಉಂಟುಮಾಡಿದೆ.ರಾಹುಲ್ ಬ್ಯಾನರ್ಜಿ ಅವರು 2008ರಲ್ಲಿ ಬಿಡುಗಡೆಯಾದ ‘ಚಿರೋದಿನಿ ತುಮಿ ಜೆ ಅಮರ್’ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದರು. ಬಳಿಕ ಹಲವು ಬಂಗಾಳಿ ಸಿನಿಮಾಗಳು, ಟಿವಿ ಕಾರ್ಯಕ್ರಮಗಳು ಹಾಗೂ ವೆಬ್ ಸರಣಿಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು.
ವೈಯಕ್ತಿಕ ಜೀವನದಲ್ಲಿ, ಅವರು ನಟಿ ಪ್ರಿಯಾಂಕಾ ಸರ್ಕಾರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಶೋಹೋಜ್ ಎಂಬ ಮಗನಿದ್ದು, ಕೆಲ ವರ್ಷಗಳ ಹಿಂದೆ ಬೇರ್ಪಟ್ಟಿದ್ದರೂ, ಮಗನ ಪಾಲನೆಗಾಗಿ ಸಹಪೋಷಕರಾಗಿ ಮುಂದುವರಿದಿದ್ದರು.
ನಟನ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
















