ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಡಿ.22): ಮಾನಂಗಿಯ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು ಮಂಜೂರು ಮಾಡಿರುವ ಮೂರು ಲಕ್ಷ ರೂ. ಸಹಾಯಧನದ ಮಂಜೂರಾತಿ ಪತ್ರವನ್ನು ದೇವಸ್ಥಾನದ ಸಮಿತಿ ಸದಸ್ಯರಿಗೆ ಬುಧವಾರ ವಿತರಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಪ್ರವೀಣ್ ಸಹಾಯಧನದ ಮಂಜೂರಾತಿ ಪತ್ರ ವಿತರಿಸಿ ಮಾತನಾಡುತ್ತ ಜೀವನದಲ್ಲಿ ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರವನ್ನು ರೂಢಿಸಿಕೊಂಡವರು ಧರ್ಮದ ಹಾದಿಯಲ್ಲಿ ನಡೆಯುತ್ತಾರೆ. ಕಪಟ, ಮೋಸ, ವಂಚನೆಗೆ ಅವಕಾಶ ನೀಡುವುದಿಲ್ಲ. ಗ್ರಾಮದ ಜನರಲ್ಲಿ ಪರಸ್ಪರ ಒಗ್ಗಟ್ಟು, ಸಹಕಾರವಿದ್ದಾಗ ಮಾತ್ರ ಇಂತಹ ಸಮುದಾಯ ಭವನ, ಧಾರ್ಮಿಕ ಕೇಂದ್ರಗಳು ನಿರ್ಮಾಣಗೊಳ್ಳಲು ಸಾಧ್ಯ. ಡಾ.ಡಿ.ವೀರೇಂದ್ರ ಹೆಗಡೆರವರು ಮಂಜೂರು ಮಾಡಿರುವ ಹಣ ಸಮುದಾಯ ಭವನ ನಿರ್ಮಾಣಕ್ಕೆ ಸದ್ವಿನಿಯೋಗವಾಗಲಿ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್ ಸಂಗಂ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಈಶ್ವರಪ್ಪ, ಕೋಶಾಧಿಕಾರಿ ಬಸವರಾಜಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ರತ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ಗೌಡರ ಮಹಾಂತೇಶಪ್ಪ, ಒಕ್ಕೂಟದ ಅಧ್ಯಕ್ಷ ನಿಂಗರಾಜ್, ವಲಯ ಮೇಲ್ವಿಚಾರಕ ಶ್ರೀನಿವಾಸ್, ಸೇವಾ ಪ್ರತಿನಿಧಿಗಳಾದ ಮಹಾಂತೇಶ್, ಶ್ರೀಮತಿ ರೋಹಿಣಿ, ಸತೀಶ್, ಬಸವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.