ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಾತೃಭಾಷೆ ಕನ್ನಡದಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಹಿನ್ನೆಲೆ, ರಾಜ್ಯ ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಕನ್ನಡ ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ, ಕನ್ನಡ ಭಾಷಾ ಪಠ್ಯಕ್ರಮವನ್ನು ಸರಳೀಕರಿಸುವ ದಿಸೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಚಿವ ಸಂಪುಟ ಸಭೆಯ ಬಳಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಲಿದ್ದು, ಪಠ್ಯಕ್ರಮದಲ್ಲಿ ಬದಲಾವಣೆ ತರಲು ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಹಾಗೂ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಅನುಕೂಲವಾಗುವಂತೆ ಪಠ್ಯಕ್ರಮ ಪರಿಷ್ಕರಣೆ ಮಾಡುವ ಯೋಚನೆ ನಡೆದಿದೆ.

ಇದಕ್ಕೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಭಾಷಾ ತಜ್ಞರು ಹಾಗೂ ಅನುಭವೀ ಶಿಕ್ಷಕರಿಂದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯ ಆಧಾರದ ಮೇಲೆ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಅನುಷ್ಠಾನ ಸಾಧ್ಯತೆಗಳನ್ನು ವಿಮರ್ಶಿಸಲಾಗುತ್ತದೆ. ಯೋಜನೆ ಅನುಮೋದನೆ ಪಡೆದರೆ, ಮುಖ್ಯಮಂತ್ರಿ ಅವರ ಒಪ್ಪಿಗೆ ಪಡೆದು ಅಧಿಕೃತವಾಗಿ ಪಠ್ಯಕ್ರಮ ಸರಳೀಕರಣ ಜಾರಿಯಾಗುವ ಸಾಧ್ಯತೆ ಇದೆ.ಅಂಕಿ-ಅಂಶಗಳ ಪ್ರಕಾರ, 2026ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ ಉತ್ತಮ ಫಲಿತಾಂಶ ಬಂದಿದ್ದರೂ, ಪ್ರಥಮ ಭಾಷೆಯಲ್ಲಿ 21 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಇದರಲ್ಲಿ ಸುಮಾರು 19 ಸಾವಿರ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲೇ ಫೇಲ್ ಆಗಿದ್ದಾರೆ.
2025ರ ಫಲಿತಾಂಶಗಳ ಪ್ರಕಾರವೂ ಪ್ರಥಮ ಭಾಷೆಯಲ್ಲಿ 90 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಬಹುಪಾಲು ಕನ್ನಡ ವಿಷಯದಲ್ಲೇ ವಿಫಲರಾಗಿದ್ದಾರೆ ಎಂಬ ಅಂಶ ಗಮನಾರ್ಹವಾಗಿದೆ.ಪಠ್ಯಕ್ರಮದಲ್ಲಿ ಹಳಗನ್ನಡದ ಅಂಶಗಳು, ಕಠಿಣ ಕವಿತೆಗಳು ಹಾಗೂ ಸಂಕೀರ್ಣ ವ್ಯಾಕರಣ ವಿಷಯಗಳು ಹೆಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಅದು ಕಷ್ಟಕರವಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಪಠ್ಯವನ್ನು ಸರಳಗೊಳಿಸಿ, ವಿದ್ಯಾರ್ಥಿ ಸ್ನೇಹಿ ರೀತಿಯಲ್ಲಿ ರೂಪಿಸುವ ಅಗತ್ಯತೆ ಎದುರಾಗಿದೆ.
ಈ ಕುರಿತು ಅಂತಿಮ ತೀರ್ಮಾನ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ನಡೆಯಲಿರುವ ಸಭೆಯ ನಂತರ ಹೊರಬೀಳುವ ಸಾಧ್ಯತೆ ಇದೆ.



















