ಬೆಂಗಳೂರು: ಸಿಎಂ ಬದಲಾವಣೆಯ ನಡುವೆ ದಲಿತ ಸಿಎಂ ಕೂಗು ಕೇಳಿ ಬರ್ತಾ ಇದೆ. ಈ ಹಿಂದೊಮ್ಮೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸಿಎಂ ಕನಸಿಗ ಬಗ್ಗೆ ಮೌನ ಮುರಿದಿದ್ದರು. ಅವಕಾಶ ಜಸ್ಟ್ ಮಿಸ್ ಆಗಿದ್ದರ ಬಗ್ಗೆಯೂ ಮಾತನ್ನಾಡಿದ್ದರು. ಅದಾದ ಮೇಲೆ ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗು ಕೇಳಿದಾಗೆಲ್ಲಾ ದಲಿತ ಸಿಎಂ ವಿಚಾರವೂ ಬರುತ್ತೆ, ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಖರ್ಗೆ ಅವರು ಬರ್ತಾರೆ ಎಂಬ ಊಹಾಪೋಹಗಳು ಹಬ್ಬುತ್ತವೆ. ಅದಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಹಳಷ್ಟು ಮಾಹಿತಿ ನಮಗೆ ಇಲ್ಲ. ಮುಖ್ಯಮಂತ್ರಿಗಳ ವಿಚಾರದಲ್ಲಿ ಮಾಧ್ಯಮದಲ್ಲಿ ಏನು ಬರ್ತಾ ಇದೆ. ಆ ಬಹಳಷ್ಟು ಮಾಹಿತಿ ನಮಗಂತು ಇಲ್ಲ. ಹಾಗಾಗಿ ಅದರ ಬಗ್ಗೆ ಹೆಚ್ಚು ಮಾತನ್ನಾಡುವುದು ಸಮಂಜಸವಲ್ಲ ಅಂತ ನನಗೆ ಅನ್ಸುತ್ತೆ. ಅದನ್ನ ಅಲ್ಲಿಗೆ ಬಿಡೋಣ. ಹೈಕಮಾಂಡ್ ಅವರು ಏನೆಲ್ಲಾ ತೀರ್ಮಾನ ತೆಗೆದುಕೊಳ್ಳುತ್ತಾರೆ, ಅವರಿಗೆ ರಾಜ್ಯದ ಪ್ರತಿಯೊಂದು ವಿಚಾರಗಳು ಗೊತ್ತು.

ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಅಖಿಲ ಭಾರತ ಕಾಂಗ್ರೆಸ್ ನ ಅಧ್ಯಕ್ಷರಾಗಿರೋದೇ ನಮ್ಮ ಸೌಭಾಗ್ಯ. ಯಾಕಂದ್ರೆ ಎಐಸಿಸಿ ಅಧ್ಯಕ್ಷರಾಗೋದು ಅಷ್ಟು ಸುಲಭವೂ ಅಲ್ಲ ಮತ್ತು ಆ ದೊಡ್ಡ ಜವಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯವೂ ಇರಬೇಕಾಗುತ್ತದೆ. ಅದಕ್ಕಾಗಿ ಖರ್ಗೆ ಅವರಿಗೆ ಆ ಅವಕಾಶವಿದೆ. ಅವರಿಗೆ ರಾಜ್ಯದ ಪ್ರತಿಯೊಂದು ರಾಜಕಾರಣವೂ ಗೊತ್ತು. ಅತ್ಯಂತ ಅನುಭವ ಇರುವಂತವರು. ಎಲ್ಲವನ್ನು ಕೂಡ ಸ್ವತಃ ಅನುಭವಿಸಿದ್ದಾರೆ, ನೋಡಿದ್ದಾರೆ. ಹಾಗಾಗಿ ನಾವೆಲ್ಲಾ ಹೇಳೋದು ಅರ್ಥ ಇರಲ್ಲ. ಅವರು ಸಿಎಂ ಆಗಿದ್ದರೆ ಬಹಳ ಸಂತೋಷ. ಅಷ್ಟೊಂದು ಹಿರಿಯ, ಅನುಭವ ಇರುವ ರಾಜಕಾರಣಿ ಅವರು. ಅವರು ಸಿಎಂ ಆಗೋದಾದ್ರೆ ಸ್ವಾಗತ ಮಾಡ್ತೇವೆ ಎಂದಿದ್ದಾರೆ.



















