ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 31 : ಐವತ್ತು ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯುವುದನ್ನು ತೋರಿಸಿದ್ದೇನೆಂದು ರೇಷ್ಮೆ ಇಲಾಖೆ ನಿವೃತ್ತ ಅಪರ ನಿರ್ದೇಶಕ ಈ.ಸುಭಾಷ್ಚಂದ್ರ ತಿಳಿಸಿದರು.
ಜಿಲ್ಲೆಯ ರೇಷ್ಮೆ ಇಲಾಖೆ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಐಎಂಎ. ಹಾಲ್ನಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.
1974-75 ರಲ್ಲಿ ಮೈಸೂರಿನಲ್ಲಿ ಉಪ ನಿರ್ದೇಶಕನಾಗಿದ್ದಾಗ ಚಿತ್ರದುರ್ಗ ಜಿಲ್ಲೆಯಲ್ಲಿ ಏಕೆ ರೇಷ್ಮೆ ಬೆಳೆಯಬಾರದೆಂದು ಆಲೋಚಿಸಿ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ, ರಾಯಾಪುರ, ಚಳ್ಳಕೆರೆ ತಾಲ್ಲೂಕಿನ ನಗರಂಗೆರೆಯಲ್ಲಿ ರೇಷ್ಮೆ ಬೆಳೆಯುವಂತೆ ಕೆಲವು ರೈತರನ್ನು ಪ್ರೋತ್ಸಾಹಿಸಿದೆ. ಅಂದಿನಿಂದ ಈ ಜಿಲ್ಲೆಯಲ್ಲಿಯೂ ರೇಷ್ಮೆ ಬೆಳೆಯಲಾಗುತ್ತಿದೆ. ಆದರೆ ಇಲಾಖೆ ಎಲ್ಲಾ ಫಾರಂಗಳನ್ನು ಅರಣ್ಯ ಇಲಾಖೆಗೆ ಕೊಟ್ಟಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯಲು ನನ್ನ ಜೊತೆ ಬಹಳಷ್ಟು ಜನ ಶ್ರಮಿಸಿದ್ದಾರೆ. ಚಿತ್ರದುರ್ಗದಿಂದ ಹಿಡಿದು ಬೀದರ್, ಬಿಜಾಪುರ ಸೇರಿದಂತೆ 19 ಜಿಲ್ಲೆಗಳಲ್ಲಿ ಸುತ್ತಾಡಿದ್ದೇನೆ. ರೇಷ್ಮೆ ಬೆಳೆದು ಅಭಿವೃದ್ದಿಪಡಿಸಲು ಸಾಕಷ್ಟು ಅವಕಾಶವಿದೆ. ಈ ಸಂಬಂಧ ರೇಷ್ಮೆ ಸಚಿವರಾದ ಪುಟ್ಟರಂಗಶೆಟ್ಟಿರವರ ಜೊತೆ ಮಾತನಾಡುತ್ತೇನೆ. ಅಧಿಕಾರಿಗಳು, ನೌಕರರು ಮುತುವರ್ಜಿ ವಹಿಸಿ ರೇಷ್ಮೆ ಬೆಳೆಯಲು ರೈತರನ್ನು ಉತ್ತೇಜಿಸಿ ಎಂದು ಸಲಹೆ ನೀಡಿದರು.
ತೋಳಹುಣಸೆಯಲ್ಲಿ ಬಿಲ್ಡಿಂಗ್ ಮತ್ತು ತರಬೇತಿ ಕೇಂದ್ರವನ್ನು ಆರಂಭಿಸಿದ್ದೇವೆ. ನಿಮ್ಮ ಸಂಘ ಬಲಿಷ್ಟವಾಗಿ ಬೆಳೆದಾಗ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬಹುದು. ಜಿಲ್ಲೆಯಲ್ಲಿ ರೇಷ್ಮೆ ಅಭಿವೃದ್ದಿಗೆ ಶ್ರಮಿಸಿ. ಮೊಳಕಾಲ್ಮುರು ರೇಷ್ಮೆ ಸೀರೆಗೆ ಹೆಸರುವಾಸಿಯಾಗಿದೆ. ಅದೇ ರೀತಿ ಬೆಳೆಯಲ್ಲಿಯೂ ನಿಮ್ಮ ಪಾತ್ರ ಮುಖ್ಯ ಎಂದು ಹೇಳಿದರು.
ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಟಿ.ಆರ್.ರಾಜಣ್ಣ ಮಾತನಾಡಿ ಯಾವುದೇ ಒಂದು ಸಂಘ ಯಶಸ್ವಿಯಾಗಬೇಕಾದರೆ ಸಂಘಟನೆ ಮತ್ತು ಪ್ರಾಮಾಣಿಕತೆ ಮುಖ್ಯ. ಚಳ್ಳಕೆರೆ ತಾಲ್ಲೂಕಿನಲ್ಲಿ ರೇಷ್ಮೆ ಬೆಳೆದ ರೈತನೊಬ್ಬನಿಗೆ ನಮ್ಮ ಅವಧಿಯಲ್ಲಿ ರಾಜ್ಯ ಪ್ರಶಸ್ತಿ ಕೊಡಿಸಿದ್ದೇವೆ. ರೇಷ್ಮೆ ಬೆಳೆಯಿಂದ ಮಾತ್ರ ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯ. ಒಂದು ಕೆ.ಜಿ.ಗೂಡಿಗೆ 150 ರೂ.ಗಳ ಖರ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಐದು ನೂರರಿಂದ ಒಂದು ಸಾವಿರ ರೂ.ಗಳವರೆಗೆ ಬೆಲೆ ಸಿಗುತ್ತದೆ. ಹಾಗಾಗಿ ರೇಷ್ಮೆ ಬೆಳೆಯತ್ತ ರೈತರು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಮನವಿ ಮಾಡಿದರು.
ರೇಷ್ಮೆ ಇಲಾಖೆಯ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಡಿ.ಡಿ.ಕೊನೇರಿ ಮಾತನಾಡಿದರು.

ನಿವೃತ್ತ ಜಂಟಿ ನಿರ್ದೇಶಕರುಗಳಾದ ವಿ.ಜಯಪ್ಪ, ಜಿ.ಎಂ.ವಿಶ್ವನಾಥ್, ಆರ್.ಎಸ್.ರುದ್ರಮೂರ್ತಿ, ನಿವೃತ್ತ ಉಪ ನಿರ್ದೇಶಕ ಎನ್.ಹೆಚ್.ಸಣ್ಣೆಗೌಡರು, ಸಂಘದ ಕಾರ್ಯದರ್ಶಿ ಹೆಚ್.ಏಕಾಂತಪ್ಪ, ಖಜಾಂಚಿ ಕೆ.ಕೃಷ್ಣಮೂರ್ತಿ, ಕೆಂಚೋಜಿರಾವ್ ಇವರುಗಳು ವೇದಿಕೆಯಲ್ಲಿದ್ದರು.
ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.















