ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ರಂಗಭೂಮಿ ಚಟುವಟಿಕೆಗಳ ಆಯಾಮಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ಬೋಧನೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಶಿಕ್ಷಕ ವೃತ್ತಿಯಲ್ಲಿ ರಂಗ ಅಭಿವ್ಯಕ್ತಿಗೆ ಮೊದಲ ಪ್ರಾಮುಖ್ಯತೆ. ಶಿಕ್ಷಕ ವೃತ್ತಿಯನ್ನು ಪ್ರಶಿಕ್ಷಣಾರ್ಥಿಗಳು ಹೆಚ್ಚಿನ ವಿಷಯಗಳನ್ನು ಅರಿತು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಆತ್ಮಸ್ಥೈರ್ಯ ಬೆಳೆದು ಸಹನೆ ಮತ್ತು ತಾಳ್ಮೆ ಗಳಿಸಬಹುದು ಎಂದು ಡಾ.ವಿ.ಬಸವರಾಜ್ ಅಭಿಪ್ರಾಯಪಟ್ಟರು.
ನಗರದ ಕೋಟೆರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ರಂಗಭೂಮಿ ಕಾರ್ಯಗಾರ ಶಿಕ್ಷಣದಲ್ಲಿ ರಂಗ ಕಲೆ ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕ ಅಭಿನಯಗಳ ಜೊತೆಗೆ ನವರಸಭರಿತ ಬೋಧನಾ ತರಬೇತಿ ಕಾರ್ಯಗಾರದಲ್ಲಿ ರಂಗಉಪನ್ಯಾಸ ನೀಡಿದರು.
ಅಭಿವ್ಯಕ್ತಿ ಶಿಕ್ಷಕರ ಸ್ವತ್ತಾಗಬೇಕು. ರಂಗಭೂಮಿ ಕ್ಷೇತ್ರವು ಜ್ಞಾನ, ಕ್ರಿಯೆ, ಚಟುವಟಿಕೆಗಳ ಜೊತೆಗೆ ವೈಚಾರಿಕತೆಯಿಂದ ಕೂಡಿದ ಆಲೋಚನೆಗಳು ಸೃಜನಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ವೈಜ್ಞಾನಿಕತೆಯನ್ನು ರೂಢಿಸಿಕೊಂಡ ಶಿಕ್ಷಕ ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತಾನೆ ಎಂದರು.
ಉಪನ್ಯಾಸಕ ಡಾ.ಕೆ.ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ರಂಗಭೂಮಿ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾಟಕ ಮಕ್ಕಳ ಶೈಕ್ಷಣಿಕ ಶಿಸ್ತನ್ನು ಮೂಡಿಸಿ ಭಯವನ್ನು ದೂರಮಾಡುತ್ತದೆ. ರಂಗಭೂಮಿಯು ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದರು.
ಶ್ರೀ ರಾಘವೇಂದ್ರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಶಿಕ್ಷಣಾರ್ಥಿಗಳು ದೈನಂದಿನ ಪಠ್ಯದೊಂದಿಗೆ ರಂಗ ಅಧ್ಯಯನಗಳನ್ನು ಕೈಗೊಳ್ಳಬೇಕು. ರಂಗ ಸಂಪನ್ಮೂಲಗಳಿಂದ ಆವೃತಗೊಂಡ ಶಿಕ್ಷಕ ವೃತ್ತಿಯು ಸಮಾಜದಲ್ಲಿ ಉನ್ನತ ಗೌರವ ಸ್ಥಾನಮಾನಗಳನ್ನು ನೀಡುತ್ತದೆ ಎಂದರು.
ಚಿನ್ಮಯ ಮಯೂರ ಯೋಗ, ಕ್ರೀಡಾ, ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಮುರುಳಿ, ಉಪನ್ಯಾಸಕರಾದ ಡಾ.ಕೆ.ಮೋಹನ್ ಕುಮಾರ್, ಬಿ.ಎಸ್.ನಟರಾಜ್, ಸುದರ್ಶನ, ಎಸ್.ಟಿ.ಪದ್ಮಶ್ರೀ, ಎಮ್.ಸ್ವಾತಿ, ಜಿ.ಎಸ್.ರಾಘವೇಂದ್ರ, ಅಧೀಕ್ಷಕ ಮಲ್ಲೇಶಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ರಂಗಭೂಮಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ನಿರ್ದೇಶನದಲ್ಲಿ ಮೂಢನಂಬಿಕೆ, ಭ್ರಷ್ಟಾಚಾರ, ವರದಕ್ಷಿಣೆ, ಅನಕ್ಷರತೆ, ರಾಜಕಾರಣ, ಪರಿಸರ ಜಾಗೃತಿ, ಬಾಲ್ಯವಿವಾಹ ಕುರಿತಾದ ನಾಟಕ ರಚನೆ, ಸಂಭಾಷಣೆ, ಪಾತ್ರ ನಿರ್ವಹಣೆ, ಪ್ರಯೋಗ ಮತ್ತು ಪ್ರದರ್ಶನದ ಮಾರ್ಗದರ್ಶನದೊಂದಿಗೆ ಪ್ರಶಿಕ್ಷಣಾರ್ಥಿಗಳು ಅಭಿನಯಿಸಿದರು. ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿ ವಿಜೇತ ಕೆ.ಪಿ.ಎಂ.ಗುರುದೇವ್ ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ಎಂ.ಬಿ.ಮಂಜುನಾಥ್ ಸ್ವಾಗತಿಸಿದರು, ಯು.ನಿಂಗಪ್ಪ ವಂದಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















